ಉಡುಪಿ, ಅ 23 (DaijiworldNews/MS): ಕೋವಿಡ್ ಸಾಂಕ್ರಾಮಿಕದಿಂದಾಗಿ 2020 ಮಾರ್ಚ್ 22 ನಂತರ ದೇಶ ವ್ಯಾಪಿಯಾಗಿ ಪ್ಯಾಸೆಂಜರ್ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸಾಮಾನ್ಯ ಜನರು, ಕಾರ್ಮಿಕ ವರ್ಗದವರು ತುಂಬಾ ಅಸಮಧಾನಗೊಂಡಿದ್ದಾರೆ. ನಾಗರೀಕರ ಒತ್ತಾಯದ ಮೇರೆಗೆ ಅಕ್ಟೋಬರ 18 ರಿಂದ ಕಾರವಾರ - ಮಡಗಾಂವ್ ಡೆಮು ರೈಲ್ವೆ ಸಂಚಾರ ಪುನಾರಂಭ ಆಗಿದೆ. ಅದರೆ ಕಾರ್ಮಿಕ ವರ್ಗದವರಿಗೆ ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಮಾಡುವವರಿಗೆ ಸಮಸ್ಯೆಯಾಗಿದೆ.
ಸದ್ಯ ಲೋಕಲ್ ರೈಲು ಸಂಚಾರ ಸ್ಥಗಿತಗೊಂಡಿದ್ದು ಒಂದುವರೆ ವರ್ಷ ಕಳೆಯುತ್ತಾ ಬಂತು, ಅಲ್ಲದೆ ಹೆಚ್ಚಿನ ರೈಲುಗಳು ಎಕ್ಸ್ಪ್ರೆಸ್ಗೆ ಬದಲಾಗಿದ್ದು ಟಿಕೆಟ್ ದರವೂ ದುಪ್ಪಟ್ಟಾಗಿದೆ. ಇದರಿಂದ ಈಗಾಗಲೇ ಸಂಕಷ್ಟದಲ್ಲಿ ಇರುವ ಬಡವರ್ಗಕ್ಕೆ ರೈಲು ಪ್ರಯಾಣವೂ ದುಬಾರಿಯಾಗಿದೆ. ಅಲ್ಲದೆ ಟಿಕೆಟ್ ಬುಕ್ಕಿಂಗನ್ನು ಕಡ್ಡಾಯವಾಗಿ ಆನ್ ಲೈನ್ ಮುಖಾಂತರ ಮಾಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಜನರೂ ಕೂಡ ಎಕ್ಸ್ ಪ್ರೆಸ್ ರೈಲು ಪ್ರಯಾಣಕ್ಕೆ ಕಡಿಮೆ ಆಸಕ್ತಿ ತೋರುತ್ತಿದ್ದಾರೆ. ಜನರಲ್ ಕೂಡ ರಿಸರ್ವಡ್ ಆಗಿರೋದರಿಂದ ದುಪ್ಪಟ್ಟು ಹಣ ಪಾವತಿ ಮಾಡುವಂತಾಗಿದೆ.
ಭಟ್ಕಳದಿಂದ ಉಡುಪಿ ಕೋವಿಡ್ ನಂತರದಲ್ಲಿ ಜಿಎಸ್ಟಿ ದರ ಸೇರಿ ರೂ ೯೨ ರೂಪಾಯಿ ಪಾವತಿ ಮಾಡಬೇಕು. ಪ್ಯಾಸೆಂಜರ್ ಟ್ರೈನ್ ಇರುವಾಗ ೪೫ ರೂ ಟಿಕೆಟ್ ದರ ಇತ್ತು.ಕೊರೊನಾ ನಂತರ ಅದು ರಿಸರ್ವಡ್ ಆಗಿರೋದರಿಂದ ಟಿಕೆಟ್ ದರ ಕೂಡ ದುಪ್ಪಟ್ಟು ಮಾಡಲಾಗಿದೆ. ಈಗಾಗಲೇ ಮೇಲಾಧಿಕಾರಿಗಳಲ್ಲಿ ಪ್ಯಾಸೆಂಜರ್ ರೈಲ್ ಓಡಿಸುವಂತೆ ಪತ್ರ ಮುಖೇನ ರೈಲ್ವೆ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೂ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ
ರಿಸರ್ವಡ್ ಮಾಡುವುದರಿಂದ ಪ್ರಯಾಣಿಕರ ಸರಿಯಾದ ಲೆಕ್ಕ ಸಿಗುತ್ತೆ. ಅದರಲ್ಲಿ ಒಬ್ಬ ಕೋವಿಡ್ ಬಂದರೂ ಆತನ ಪ್ರಾಥಮಿಕ ಸಂಪರ್ಕವನ್ನು ಸುಲಭವಾಗಿ ಕಂಡು ಹಿಡಿಯಬಹುದು ಎನ್ನುವುದು ರೈಲ್ವೆ ಮಂಡಳಿಯ ಅಭಿಪ್ರಾಯ. ಮಂಗಳೂರು - ಮಡಂಗಾವ್ ರೈಲು ಪಾಲ್ಗಾಟ್ ದಕ್ಷಿಣ ರೈಲ್ವೆಗೆ ಸೇರಿದೆ. ಮೊದಲು ಮಂಗಳೂರು - ಮಡಂಗಾವ್ ಒಂದು ಪ್ಯಾಸೆಂಜರ್ ಮತ್ತು ಮಡಂಗಾವ್ - ಮಂಗಳೂರು ಡೆಮು ರೈಲು ಒಟ್ಟು ಎರಡು ರೈಲು ಸಂಚಾರವಿತ್ತು. ಈಗ ಅದರ ಸಂಚಾರ ಆರಂಭವಾಗದೆ ಇರುವುದರಿಂದ ಜನರು ಕಷ್ಟ ಪಡುವಂತಾಗಿದೆ.
ಟಿಕೆಟ್ ಬುಕ್ಕಿಂಗ್ ಮಸ್ಟ್
ಎಲ್ಲವೂ ವಿಶೇಷ ರೈಲುಗಳು ಆಗಿರುವುದರಿಂದ ಆನ್ಲೈನ್ ಮುಖಾಂತರ ಟಿಕೆಟ್ ಬುಕ್ಕಿಂಗ್ ಮಾಡಬೇಕಾಗುತ್ತದೆ. ರೈಲ್ವೇ ನಿಲ್ದಾಣದಲ್ಲಿ ಈ ವ್ಯವಸ್ಥೆ ಇದ್ದರೂ ಬರುವವರ ಸಂಖ್ಯೆ ಕಡಿಮೆ. ಟ್ರಾವೆಲಿಂಗ್ ಏಜೆನ್ಸಿಯಲ್ಲಿ ಕಮಿಷನ್ ಕೊಡಬೇಕಾಗುತ್ತೆ. ಇದೆಲ್ಲಾ ಸ್ಮಾರ್ಟ್ ಫೋನ್ ಇರದವರ ಮತ್ತು ಅನಕ್ಷರಸ್ಥರಿಗೆ ಸಮಸ್ಯೆಯಾಗಿ ಉಳಿದುಕೊಂಡಿದೆ.
ಹಾಗಾಗಿ ಕೋವಿಡ್ ನಿಯಮವನ್ನು ಅನುಸರಿಸಿಕೊಂಡು ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅನುಮತಿ ಕೊಡಲಿ ಎನ್ನುವುದು ಸಾರ್ವಜನಿಕ ವಲಯದ ಆಗ್ರಹವಾಗಿದೆ.