ಉಡುಪಿ, ಅ 22 (DaijiworldNews/MS): ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ಸರಕಾರ ಕೊನೆಪಕ್ಷ ಬದಲಿ ವ್ಯವಸ್ಥೆಗೆ ಪ್ರಯತ್ನಗಳನ್ನು ಮಾಡುತ್ತಿದೆ. ಈಗ ದೇಶಕ್ಕೆ ಸಂಕಷ್ಟದ ಕಾಲ. ದೇಶದ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರಕಾರ ಅನೇಕ ಕ್ರಮಗಳನ್ನು ಕಾಲಕಾಲಕ್ಕೆ ತೆಗೆದು ಕೊಳ್ಳುತ್ತಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಪೆಟ್ರೋಲ್ -ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿ ಸಂಕಷ್ಟ ಎದುರಿಸುತ್ತಿದ್ದೇವೆ, ಈ ಮಾತನ್ನು ನಾವು ತಳ್ಳಿ ಹಾಕುತ್ತಿಲ್ಲ.ಜನರು ಪಾವತಿಸಿದ ತೆರಿಗೆ ಪ್ರಧಾನ ಮಂತ್ರಿ ಮೋದಿಯ ಆಡಳಿತದಲ್ಲಿ ಸುರಕ್ಷಿತವಾಗಿದೆ. ಜನರ ಸೇವೆಗಾಗಿ, ಕೋವಿಡ್ ಸ್ಥಿತಿಯನ್ನು ನಿರ್ವಹಿಸಲು ಸದ್ವಿನಿಯೋಗವಾಗುತ್ತಿದೆ. ಜನರು ವಿಶ್ವಾಸವನ್ನಿಡಬೇಕು. ದೇಶದ ನಾಗರೀಕರು "ಒಬ್ಬ ಸುರಕ್ಷಿತನ ಕೈಯಲ್ಲಿ ಸರಕಾರ ಇದೆ ಎಂಬ ವಿಶ್ವಾಸ ಇಡಬೇಕು". ಕೋವಿಡ್ ನಂತಹ ಸಂಕಷ್ಟ ಸಮಯದಲ್ಲಿ ಅಪ್ರಬುದ್ದ ರಾಹುಲ್ ಗಾಂಧಿಯವರ ಕೈಯಲ್ಲಿ ಸರಕಾರ ಇದ್ದಿದ್ದರೆ ಏನಾಗುತ್ತಿತ್ತೋ ಊಹಿಸಲಾಗದು ಎಂದು ನುಡಿದಿದ್ದಾರೆ.
ಲಾಕ್ ಡೌನ್ ನಿಂದಾಗಿ ಸರಕಾರಕ್ಕೆ ಆರ್ಥೀಕವಾಗಿ ತೊಂದರೆಯಾಗಿದೆ. ಆ ನಷ್ಟವನ್ನು ಭರಿಸಲು, ಆರ್ಥಿಕವಾಗಿ ಸಮದೂಗಿಸಲು ಈ ರೀತಿಯ ಸುಧಾರಣೆಗಳನ್ನು ಸರಕಾರ ತರುತ್ತಿದೆ. ಸುಧರಣೆಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಲಸಿಕೆ ವಿಚಾರವಾಗಿ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ, "ಭಾರತದಲ್ಲಿ ಲಸಿಕೆ ಕೊಡುವಾಗ, ವಿರೋಧ ಪಕ್ಷದ ನಾಯಕರು ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿದರು. ಜನರು ಕೂಡ ಸ್ವಲ್ಪ ಮಟ್ಟಿಗೆ ಹಿಂಜರಿದರು. ಕೋವಿಡ್ ಹೆಚ್ಚಿದಾಗ ಲಸಿಕೆ ಸಂಗ್ರಹ ಇಲ್ಲ ಎಂದು ಹೋರಾಟ ಮಾಡಿದರು. ವಿರೋಧ ಪಕ್ಷದ ನಾಯಕರು ಯಾರೂ ಕೋವಿಡ್ ಮುಖ್ಯವಾಹಿನಿಗೆ ಬಂದು ಕೆಲಸ ಮಾಡಿಲ್ಲ. ಒಂದು ವಿಷಯದಲ್ಲಿ ಮಾತ್ರ ಸರಕಾರದ ಒಂದು ನಿಯಮಕ್ಕಿಂತ ಮುಂದೆ ಹೋಗಿ ಆ ಕೆಲಸ ಮಾಡಿದರು. ಅದೇನೆಂದರೆ, ೬೦ ದಿನ ಹೋಮ್ ಕ್ವಾರಂಟೈನಲ್ಲಿ ಸುರಕ್ಷಿತವಾಗಿದ್ದರು. ಆದರೆ ಪೇಸ್ ಬುಕ್ನಲ್ಲಿ ಲೈವ್ ಬಂದು ಟ್ವೀಟರ್ ನಲ್ಲಿ ಟೀಕೆ ಮಾಡುತ್ತಿದ್ದರು ಎಂದು ವಿರೋಧ ಪಕ್ಷದವರನ್ನು ಉಡುಪಿಯ ಶಾಸಕರಾದ ರಘುಪತಿ ಭಟ್ ಟೀಕಿಸಿದರು.