ಬಂಟ್ವಾಳ, ಅ.21 (DaijiworldNews/HR): ಟಿಪ್ಪರ್ ಚಾಲಕನೊಬ್ಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ. ಅಕ್ಟೋಬರ್ 19 ರ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.
ಬಂಧಿತರನ್ನು ಅಬ್ದುಲ್ ಐಸಾಕ್ ಮತ್ತು ಮೊಯ್ದೀನ್ ಅಝರ್ ಎಂದು ಗುರುತಿಸಲಾಗಿದೆ.
ಕಾನ್ಸ್ಟೇಬಲ್ ಶೇಖರ್ ಮತ್ತು ರಾಧಾಕೃಷ್ಣ ಅವರು ಫರಂಗಿಪೇಟೆ ಹೊರ ಠಾಣೆ ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದರು. ಮುಂಜಾನೆ 2.30 ರ ಸುಮಾರಿಗೆ ಮಂಗಳೂರಿನಿಂದ ಬರುತ್ತಿದ್ದ ಟಿಪ್ಪರ್ ಅನ್ನು ತಡೆಯಲು ಯತ್ನಿಸಿದಾಗ, ಚಾಲಕ ವಾಹನವನ್ನು ಕಾನ್ ಸ್ಟೇಬಲ್ ಶೇಖರ್ ಮೇಲೆ ಚಲಾಯಿಸಲು ಪ್ರಯತ್ನಿಸಿದ. ಇನ್ನೊಬ್ಬ ಹೋಮ್ ಗಾರ್ಡ್ ಶೇಖರ್ ಅನ್ನು ಹಿಂದಕ್ಕೆ ಎಳೆದಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಯಿತು.
ಇನ್ನು ಟಿಪ್ಪರ್ ಚಾಲಕ ಬ್ಯಾರಿಕೇಡ್ಗೆ ನುಗ್ಗಿದ ನಂತರ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಟಿಪ್ಪರ್ ಅನ್ನು ಹಿಂಬಾಲಿಸುತ್ತಿದ್ದ ಆಲ್ಟೊ ಕಾರ್ ಕೂಡ ನಿಲ್ಲಿಸದೆ ಹೋಗಿದ್ದು, ಚಾಲಕನ ಜೊತೆಗಿದ್ದ ವ್ಯಕ್ತಿಯೊಬ್ಬರು ಪೊಲೀಸರನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.