ಕಾರ್ಕಳ, ಅ.21 (DaijiworldNews/PY): "ಇಂಧನ ಬೆಲೆ ಏರಿಕೆಯ ಕುರಿತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ತೀವ್ರ ಹಾಸ್ಯಾಸ್ಪದವಾಗಿದೆ" ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿ ಆರೋಪಿಸಿದೆ.
"ಕಳೆದ 65 ವರ್ಷಗಳಷ್ಟು ಸುಧೀರ್ಘವಾಗಿ ದೇಶವನ್ನು ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷ ಪೆಟ್ರೋಲ್, ಡಿಸೇಲ್ ಬೆಲೆ ನಿಯಂತ್ರಣಕ್ಕೆ ಪ್ರಯತ್ನ ಪಡಲಿಲ್ಲ. ಈಗ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಬ್ಯಾರಲ್ ಬೆಲೆ ನಿಯಂತ್ರಣದಲ್ಲಿರದ ಕಾರಣ ಸದ್ಯಕ್ಕೆ ವಿಶ್ವದಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಲು ಕಾರಣವಾಗಿದ್ದು ಮುಂದಿನ ಕೆಲವೇ ದಿನದಲ್ಲಿ ಬೆಲೆ ಹತೋಟಿಗೆ ಬರಲಿರುವುದು" ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿಯ ವಕ್ತಾರ ಹರೀಶ್ ಶೆಣೈ ಹೇಳಿದ್ದಾರೆ.
"ಅಲ್ಪಸಂಖ್ಯಾತರ ಮತಕ್ಕಾಗಿ ಈ ಹಿಂದಿನಿಂದಲೂ ಗೋಹತ್ಯೆ ಹಾಗೂ ಮತಾಂತರಕ್ಕೆ ಕುಮ್ಮಕ್ಕು ನೀಡಿರುವುದಕ್ಕೆ ಕಾಂಗ್ರೆಸ್ ಕಾರಣ. ಪ್ರಸ್ತುತ ರಾಜ್ಯ ಬಿಜೆಪಿ ಸರಕಾರ ಹೊಸ ಕಾನೂನಿನ ಮೂಲಕ ಗೋಹತ್ಯೆ ಹಾಗೂ ಮತಾಂತರ ಹಾವಳಿಯನ್ನು ಸಂಪೂರ್ಣ ತೊಲಗಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುವುದು ಬೇಸರದ ವಿಷಾದನೀಯವಾಗಿದೆ" ಎಂದಿದ್ದಾರೆ.
"ಕಾರ್ಕಳದ ಕಾಂಗ್ರೆಸ್ನಲ್ಲಿ ನಾಯಕತ್ವ ಕೊರತೆಗೆ ವೀರಪ್ಪ ಮೊಯಿಲಿಯವರೇ ಕಾರಣವೆಂಬುವುದು ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರ ಸಾರ್ವಜನಿಕರ ಮಾತು ಈಗ ನಿಜವಾಗಿದೆ" ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.