ಬಂಟ್ವಾಳ, ಅ.21 (DaijiworldNews/PY): ತಾಲೂಕಿನಲ್ಲಿರುವ ಕೊರಗ ಸಮುದಾಯದ ಜನಗಣತಿನ್ನು ಸಮಾಜ ಕಲ್ಯಾಣ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಡೆಸಲು ಗುರುವಾರ ಬಂಟ್ವಾಳ ತಾ.ಪಂ.ಎಸ್.ಜಿ.ಎಸ್ .ವೈ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಕೊರಗ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೊರಗ ಅಭಿವೃದ್ಧಿ ಸಮಿತಿ ಹಾಗೂ ತಹಶೀಲ್ದಾರ್ ರಶ್ಮೀ ಎಸ್.ಆರ್.ಅವರ ಅಧ್ಯಕ್ಷತೆಯಲ್ಲಿ ನಡೆದ ಕೊರಗ ಸಮುದಾಯದ ಕುಂದುಕೊರತೆ ಜಂಟಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕೊರಗ ಸಮುದಾಯದ ಮುಖಂಡ ಸುಂದರ ಬೆಳುವಾಯಿ ಅವರು ವಿಷಯ ಪ್ರಸ್ತಾಪಿಸಿ, "ಬಂಟ್ವಾಳ ತಾಲೂಕು ಸಹಿತ ಜಿಲ್ಲೆಯಲ್ಲಿ ಕೊರಗ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ. ಸುಳ್ಯದಲ್ಲಿ ಐದು ಕುಟುಂಬವೇ ಕಾಣುತ್ತಿಲ್ಲ. ಕೊರಗ ಸಮುದಾಯದ ಸಮಸ್ಯೆಯನ್ನು ಆಲಿಸುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಬೇಕು" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರಶ್ಮೀ, "ಕೊರಗ ಸಮುದಾಯದ ಜನಸಂಖ್ಯೆಯನ್ನು ಗುರುತಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಲು ಕ್ರಮಕೈಗೊಳ್ಳಲಾಗುವುದಲ್ಲದೆ ನಾಲ್ಕೈದು ಗ್ರಾ.ಪಂ.ನ್ನು ಸೇರಿಸಿಕೊಂಡು ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು" ಎಂದು ಭರವಸೆಯಿತ್ತರು.
ಕೊರಗ ಸಮುದಾಯಕ್ಕೆ ಕೃಷಿ ಯೋಗ್ಯವಾದ ಭೂಮಿ ಹಂಚಿಕೆ ಮಾಡಿದಾಗ ಸರಕಾರದ ಯೋಜನೆಯನ್ನು ಪಡೆದು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಎಂದ ಸುಂದರ ಬೆಳವಾಯಿ ಅವರು ಇನ್ನು ಕೂಡ ಶೌಚಾಲಯವಿಲ್ಲದ ಕೊರಗ ಸಮುದಾಯದ ಕುಟುಂಬಗಳಿವೆ ಹಾಗೆಯೇ ಗ್ರಾ.ಪಂ.ವ್ಯಾಪ್ತಿಯಲ್ಲಿ ಕನಿಷ್ಠ ಮೂರು ಎಕ್ರೆ ಜಮೀನನ್ನು ಕೊರಗ ಸಮುದಾಯಕ್ಕೆ ಐ.ಟಿ.ಡಿ.ಪಿ.ಹೆಸರಿನಲ್ಲಿ ಕಾದಿರಿಸುವಂತೆಯು ಸಭೆಯ ಗಮನ ಸೆಳೆದರು.
ಶೌಚಾಲಯವಿಲ್ಲ ಕುಟುಂಬಗಳ ವಿವರ ಒದಗಿಸುವಂತೆ ತಹಶೀಲ್ದಾರ್ ರಶ್ಮೀ ಅವರು ಸೂಚಿಸಿದರು.
ಮರದಡಿಯಲ್ಲಿ ಸಭೆ:
ಎಲ್ಲಾ ಸಮುದಾಯಕ್ಕೂ ಭವನವಿದ್ದು, ಕೊರಗ ಸಮುದಾಯಕ್ಕೆ ಇದುವರೆಗೂ ಭವನಕ್ಕೆ ನಿವೇಶನ ಮಂಜೂರಾಗಿಲ್ಲ ನಮ್ಮ ಸಮುದಾಯದ ಮುಖಂಡರು ಪಾಣೆಮಂಗಳೂರಿನಲ್ಲಿ ಮರವೊಂದರ ಅಡಿಯಲ್ಲಿ ಸಭೆಸೇರುತ್ತೇವೆ. ನಮ್ಮ ಸಮಸ್ಯೆಗಳನ್ನು ಚರ್ಚಿಸಲು ಅನುಕೂಲವಾಗಲು "ಕೊರಗ ಭವನ" ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಕಡಬ ಪ.ಪಂ.ನ ಮುಖ್ಯಾಧಿಕಾರಿ ಮತ್ತಡಿ ಅವರು ಸಭೆಯ ಗಮನ ಸೆಳೆದರು. ಸಭೆ ನಡೆಸುವ ಸಂದರ್ಭ ಮಾಹಿತಿ ನೀಡಿದಲ್ಲಿ ತಮಗೆ ಅನುಕೂಲವಾಗಲ್ಲಿ ಅಂಬೇಡ್ಕರ್ ಭವನವನ್ನು ಉಚಿತವಾಗಿ ಒದಗಿಸಲಾಗುವುದು ಎಂದು ತಾಪಂ.ಇಒ ರಾಜಣ್ಣ ಅವರು ತಿಳಿಸಿದರೆ, ಬಿ.ಮೂಡದಲ್ಲಿ ಕೊರಗ ಭವನಕ್ಕಾಗಿ ಸಲ್ಲಿಸಲಾದ ಪ್ರಸ್ತಾವನೆಯಂತೆ ಜಮೀನು ಗುರುತಿಸಿ,ಸರ್ವೇ ಕೂಡ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಕೊರಗರ ಬದುಕಿನ ಕುರಿತು ಡಾ.ಮಹಮ್ಮದ್ ವೀರ್ ಅವರು ಅಧ್ಯಯನ ನಡೆಸಿ ವರದಿಯೊಂದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸುಂದರ ಬೆಳುವಾಯಿ ಹಾಗೂ ಮತ್ತಡಿ ಅವರು ಸಭೆಗೆ ತಿಳಿಸಿದರು.
ಕನ್ಯಾನದಲ್ಲಿ ಮಂಜೂರಾದ ಡಿಸಿ ಮನ್ನ ಜಾಗ ಖಾಲಿ ಇದ್ದು, ಅಲ್ಲಿರುವ ಮರಮಟ್ಟುಗಳನ್ಮು ಅಕ್ರಮವಾಗಿ ಕಡಿದುಸಾಗಿಸಲಾಗುತ್ತಿದೆ ಎಂದು ಸ್ಥಳೀಯ ಮಹಿಳೆಯೋರ್ವರು ಸಭೆಯ ಗಮನಕ್ಕೆ ತಂದರು. ಅಲ್ಲಿ ಸಂಬಂಧ ಪಟ್ಟವರು ಇಲ್ಲದಿದ್ದಲ್ಲಿ ಆ ಜಮೀನನ್ನು ಬೇರೆಯವರಿಗೆ ಮಂಜೂರು ಮಾಡಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ರಶ್ಮೀ ಗ್ರಾಮಕರಣಿಕರಿಗೆ ಸೂಚಿಸಿದರು. ಸರಪಾಡಿ ಗ್ರಾಮದಲ್ಲಿ ಸೋಮು ಎಂಬವರಿಗೆ ಗ್ರಾಪಂ.ಕಳೆದ 7 ವರ್ಷದಿಂದ ಮನೆ ನಂಬರ್ ನೀಡದಿರುವುದು,ವಿಟ್ಲ ಕಸ್ಬ ಗ್ರಾಮದಲ್ಲಿ ರಸ್ತೆ,ನೀರಿನ ಸೌಲಭ್ಯ,ಮರ ಕಡಿಯುವುದು, ಚೆನ್ನೈತ್ತೋಡಿ ಗ್ರಾಮದ ಕೊರಗರ ಕೊಲನಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಿತು.ಈ ಸಂದರ್ಭ ಪ್ರತಿಕ್ರಿಯಿಸಿದ ತಾಪಂ ಇಒ ರಾಜಣ್ಣ ಅವರು,ಮೂಲ ಭೂತ ಸೌಕರ್ಯಕ್ಕಾಗಿ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದರೆ ಅದನ್ನು ಸಂಬಂಧಿಸಿದ ಇಲಾಖೆಯಿಂದ ಕಾರ್ಯಗತಗೊಳಿಸಲು ಕ್ರಮಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯದ ಬೇಡಿಕೆಯ ಮನವಿ ಕೊಟ್ಟರೆ ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಾಗುವುದು ಎಂದರು.
ಇದೇ ವೇಳೆ ಕೊರಗ ಜನಾಂಗಕ್ಕೆ ವೈಯಕ್ತಿಕ ಕಾಮಗಾರಿಗೆ ಅನುದಾನ ಒದಗಿಸುವಂತೆ ಕೋರಿ ನಿರ್ಣಯ ಕೈಗೊಳ್ಳಲಾಯಿತು.
ಕೋಳಿಮರಿ ನಮಗೆ ಸಿಕ್ಕಿಲ್ಲ: ಕೆಲ ಸಮಯದ ಹಿಂದೆ ಮಂಚಿಯಲ್ಲಿ ಪಶುಸಂಗೋಪನಾ ಇಲಾಖೆಯಿಂದ ಕೋಳಿ ಮರಿ ವಿತರಿಸಲಾಗಿದ್ದು, ನಮ್ಮ ಸಮುದಾಯಕ್ಕೆ ಒಂದೇ ಒಂದು ಕೋಳಿಮರಿ ಸಿಕ್ಕಿಲ್ಲ, ನಮ್ಮ ಜನಾಂಗದ ಹೆಸರಿನಲ್ಲಿ ಬಂದಿರುವ ಕೋಳಿ ಮರಿಯನ್ನು ಇತರರಿಗೆ ವಿತರಿಸಲಾಗಿದೆ ಎಂದು ಮಹಿಳಾ ಮುಖಂಡೆಯೋರ್ವರು ಸಭೆಯಲ್ಲಿ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನಾ ಇಲಾಖಾಧಿಕಾರಿ, ಜಿಪಂ ನ ಯೋಜನೆ ಇದಾಗಿದ್ದು, ಜಿಪಂ ಸದಸ್ಯರು ಫಲಾನುಭವಿಗಳನ್ನು ಗುರುತಿಸಿದವರಿಗೆ ಕೋಳಿಮರಿ ವಿತರಿಸಲಾಗಿದೆ. ಸದ್ಯ ಈಗ ಜಿಪಂ ಸದಸ್ಯರಿಲ್ಲ. ಹಾಗಾಗಿ ಈ ಬಾರಿ ಯೋಜನೆ ಬಂದಿಲ್ಲ ಎಂದು ಸಮಜಾಯಿಷಿ ನೀಡಿದರು.
ಈ ಉತ್ತರದಿಂದ ತೃಪ್ತರಾಗದ ಮಹಿಳೆ 'ಖಡಕ್ ಇಸ್ತ್ರೀಯ ಬಿಳಿ ಬಟ್ಟೆ ಹಾಕಿಬಂದವರಿಗೆ ಮಾತ್ರ ಕೋಳಿಮರಿ ನಮ್ಮಂತಹ ಬಡವರಿಗಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಗೆ ಸಂಬಂಧಿಸಿ ಸವಲತ್ತುಗಳ ಸಹಿತ ಯಾವುದೇ ಮಾಹಿತಿಯನ್ನು ಪ.ಪಂ.ಮುಖ್ಯಾಧಿಕಾರಿ ಮತ್ತಡಿಯವರಿಂದ ಸಲಹೆ ಪಡೆದುಕೊಳ್ಳುವಂತೆ ಇಒರಾಜಣ್ಣ ತಿಳಿಸಿದರು.
ತಾಲೂಕು ಕೃಷಿ ಸಹಾಯ ನಿರ್ದೇಶಕ ಚೆನ್ನ ಕೇಶವ ವೇದಿಕೆಯಲ್ಲಿದ್ದರು. ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶೀಲ ಸ್ವಾಗತಿಸಿ, ವಂದಿಸಿದರು.