ಕಾಸರಗೋಡು, ಅ. 21 (DaijiworldNews/SM): ಜಿಲ್ಲೆಯ ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ ದಾಸ್ತಾನಿರುವ ಎಂಡೋ ಸಲ್ಫಾನ್ ನಿಷ್ಕ್ರೀಯಗೊಳಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಕುರಿತು ತಜ್ಞರ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯ ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜಿಲ್ಲೆಯ ಮೂರು ಗೋದಾಮುಗಳಲ್ಲಿ 1,438 ಲೀಟರ್ ಎಂಡೋಸಲ್ಫಾನ್ ದಾಸ್ತಾನಿದ್ದು, ಇದನ್ನು ನಿಷ್ಕ್ರೀಯಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆದರೆ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಕುರಿತು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ನಿಷೇಧ ಹೇರಿದ ಕೀಟನಾಶಕವನ್ನು ತಜ್ಞರ ಸಲಹೆಯಂತೆ ನಿಷ್ಕ್ರೀಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಜನರ ಆತಂಕವನ್ನು ಪರಿಹರಿಸಿ ತಜ್ಞರ ವರದಿಯಾದರದಲ್ಲಿ ಮುಂದಿನ ಕ್ರಮತೆಗೆದುಕೊಳ್ಳಲಾಗುವುದು. ಎಂಡೋಸಲ್ಫಾನ್ ಕೀಟನಾಶಕ ನಿಷ್ಕ್ರೀಯ ಕುರಿತು ಈಗ ಇರುವ ಪ್ರಕ್ರಿಯೆಗಳ ಬಗ್ಗೆ ಕೇರಳ ವಿಶ್ವ ವಿದ್ಯಾನಿಲಯದ ತಜ್ಞರು ಸಭೆಯಲ್ಲಿ ಮಾಹಿತಿ ನೀಡಿದರು.
ಈಗ ಇರುವ ಪ್ರಕ್ರಿಯೆ ಮೂಲಕ ನಿಷ್ಕ್ರೀಯ ನಡೆಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ ತಜ್ಞರಿಂದ ವರದಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.