ಕಾರ್ಕಳ, ಅ.21 (DaijiworldNews/PY): ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಕಲ್ಲಿನಲ್ಲಿ ಕೆತ್ತಲಾದ ಶಾಸನವೊಂದು ಪತ್ತೆಯಾಗಿದೆ.
ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪುರಾತತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಕಾರ್ತಿಕ್, ಗೌತಮ್, ಶ್ರೇಯಸ್ ಅವರು ಒಂದು ಶಾಸನವನ್ನು ಪತ್ತೆ ಹಚ್ಚಿದ್ದಾರೆ ಎಂದು ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿ ಅವರು ತಿಳಿಸಿದ್ದಾರೆ.
ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನ, 8 ಸಾಲಿನಲ್ಲಿ ಬರೆಯಲ್ಪಟ್ಟಿದೆ. ಧೀರ್ಘ ಲಿಂಗಾಕೃತಿಯ ಕಲ್ಲಿನ ಒಂದು ಪಾರ್ಶ್ವದ ಮೇಲೆ, ವೃತ್ತಾಕಾರದ ಸೂರ್ಯ, ಅದರ ಕೆಳಭಾಗದಲ್ಲಿ ಅರ್ಧ ಚಂದ್ರಾಕೃತಿಯನ್ನು ಕೊರೆಯಲಾಗಿದೆ. ಈ ಚಿತ್ರಗಳ ಕೆಳಭಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳ ಬರವಣಿಗೆಯಿದೆ. ಈ ಕಲ್ಲು ಸುಮಾರು 167 ಸೆ.ಮೀ. ಎತ್ತರವಿದೆ.
1905ರಲ್ಲಿ ಮರಣ ಹೊಂದಿದ ಬೆಣಿಯ ಅಂಕಯ್ಯ ಶೆಟ್ರ, ಮರಣ ದಾಖಲೆಯಿದು. ಸುಮಾರು 116 ವರ್ಷಗಳ ಹಿಂದೆ ಮರಣ ಹೊಂದಿದ ಬೆಣಿಯ ಅಂಕಯ್ಯ ಶೆಟ್ಟಿ ಆ ಕಾಲದ ಪ್ರಸಿದ್ಧ ವ್ಯಕ್ತಿಯಾಗಿದ್ದಿರಬೇಕು ಎಂದು ಊಹಿಸಲಾಗಿದೆ. ಆ ವ್ಯಕ್ತಿಯ ಮರಣಾ ನಂತರ ಅವರ ಅಂತ್ಯ ಸಂಸ್ಕಾರದ ಜಾಗದಲ್ಲಿ ಈ ವಿಶಿಷ್ಠವಾದ ಕಲ್ಲನ್ನು ನಿಲ್ಲಿಸಲಾಗಿದೆ. 20ನೇ ಶತಮಾನದ ಆದಿ ಭಾಗದಲ್ಲೂ ಶಾಸನಗಳನ್ನು ಬರೆಸುವ ಪದ್ಧತಿ ಕರಾವಳಿಯಲ್ಲಿ ಜೀವಂತವಾಗಿತ್ತೆನ್ನುವುದಕ್ಕೆ ಈ ಶಾಸನ ಉತ್ತಮ ಉದಾಹರಣೆಯಾಗಿದೆ. ಶಾಸನದಲ್ಲಿ ಕ್ರಮವಾಗಿ 1905ನೇ ಲೂ ಬೆಣಿಯ ಅಂಕಯ್ಯ ಶೆಟ್ರು ಎಂಬ ಬರಹವನ್ನು ಕೆತ್ತಲಾಗಿದೆ.