ಕಾರ್ಕಳ, ಅ. 20(DaijiworldNews/HR): ಧರ್ಮ, ಸನ್ಮಾರ್ಗದಲ್ಲಿ ನಡೆಯುವಾಗ ಎದುರಾಗುವ ಪರೀಕ್ಷೆಗಳು ಸವಾಲುಗಳನ್ನು ಎದುರಿಸಿ ಜಯವನ್ನು ಪ್ರಾಪ್ತಿಯಾಗಿ ಅದರ್ಶ ಪ್ರಾಯವಾಗಿ ಬದುಕುವ ಹಾದಿಯನ್ನು ಮಹರ್ಷಿ ವಾಲ್ಮೀಕಿ ರಚಿಸಿದ ಮಹಾ ಕಾವ್ಯ ರಾಮಾಯಣದಲ್ಲಿದೆ. ಜಾತಿಗಿಂತ ನೈತಿಕತೆ ಪ್ರಮುಖತೆ ಹೊಂದಿದೆ. ಇತಿಹಾಸ, ಸಂಸ್ಕೃತಿ, ಪುರಾಣ, ಮಾನವೀಯ ಕುಲ, ಭಾಷೆ ಹುಟ್ಟಿರುವುದು ಅಖಂಡ ಭರತದಲ್ಲಿ ಆಗಿದೆ ಎಂದು ಸಾಮಾಜಿಕ ಚಿಂತಕರು ಹಾಗೂ ಯುವವಾಗ್ಮಿ ಸುಶಾಂತ್ ಸುಧಾಕರ ಹೇಳಿದರು.
ತಾಲೂಕು ಆಡಳಿತ, ಪುರಸಭೆ ಕಾರ್ಕಳ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, "ವಿವಿಧ ಸ್ತರಗಳಲ್ಲಿ ರಾಮಾಯಣಗಳು ಹುಟ್ಟಿಕೊಂಡಿದ್ದು, ಮೂಲ ರಾಮಾಯಣವು ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ. ತನ್ನ ತಪೋದಿಂದ ಹುತ್ತದಲ್ಲಿ ಪುನರ್ಜೀವ ಪಡೆದು ಅವರು ವಾಲ್ಮೀಕಿಯಾಗಿ ವಿಶ್ವಕ್ಕೆ ಅದರ್ಶಪ್ರಾಯರಾದರು. ಅವರ ಮಹಾಕಾವ್ಯದ ವಿಚಾರ ಧಾರೆಯು ಸರ್ವಕಾಲಿಕವಾಗಿದ್ದು, ಅದನ್ನು ಪರಿಪಾಲಿಸಿದಾಗ ಮಹಾತ್ಮಗಾಂಧೀಜಿಯವರು ಕಂಡ ರಾಮರಾಜ್ಯದ ಕನಸ್ಸು ನಸಸಾಗುತ್ತದೆ. ಸಮಾಜದಲ್ಲಿ ಸಮಾರಸ್ಯದ ಬದುಕು ಕಾಣಬಹುದು" ಎಂದರು.
ಇನ್ನು ಮಹಾಕಾವ್ಯವು ಭರತಖಂಡಕ್ಕೆ ಅಥವಾ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದುದಲ್ಲ. ವಿಶ್ವದ ಮಾನವ ಸಂಕುಲ ಅದನ್ನು ಅನುಸರಿಸಿ ಬಾಳಿದಾಗ ಜೀವನ ಸಾರ್ಥಕತೆ ಕಾಣಬಹುದು. ರಾಮರಾಜ್ಯದಲ್ಲಿ ಪ್ರತಿಯೊಬ್ಬರು ಸುಖ,ಶಾಂತಿಯಿಂದ ಜೀವನಸಾಗಿಸುವಂತಾಗಬೇಕು. ನಂಬಿಕೆಯಿಂದಲೇ ಬದುಕು. ಈ ನಡುವೆ ನಡೆ,ನುಡಿ ಚಿಂತನೆ,ಅನನ್ಯ,ಮೌಲ್ಯ, ಅದರ್ಶ ತನ್ಮೂಲಕ ಮುಂದಿನ ಭವಿಷ್ಯ ರೂಪಿಸಿದಾಗ ಉತ್ತಮ ಬದುಕು ಪ್ರಾಪ್ತಿಯಾಗುತ್ತದೆ ಎಂದಿದ್ದಾರೆ.
ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಪ್ರತಿಭಾ ಆರ್. ಮಾತನಾಡಿ, ವಾಲ್ಮೀಕಿಯವರು ಮಾಹಕಾವ್ಯದಲ್ಲಿ ಸೃಷ್ಠಿಸಿದ ಪಾತ್ರಗಳು ಅನುಕರಣಿಯವಾದುದಾಗಿದೆ. ಧರ್ಮ,ಕಮಂ ವಿಭಿನ್ನವಲ್ಲ. ಅಧಿಕಾರಿಗಳು ಅದನ್ನು ತಮ್ಮ ವೃತ್ತಿ ಜೀವನದಲ್ಲಿ ಪರಿಪಾಲನೆ ಮಾಡುವುದು ಅಗತ್ಯವೆಂದರು.
ತಹಶೀಲ್ದಾರ್ ಕೆ.ಪುರಂದರ ಮಾತನಾಡಿ, ಋಷಿ,ಮುನಿ,ಗುರು,ಮಹರ್ಷಿ ಪರಂಪರೆಯು ಮುಂದಿನ ಪೀಳಿಗೆಗಾಗಿ ಹೊಸ ಹೊಸ ವಿಚಾರಗಳು, ಚಿಂತನೆಗಳು, ತತ್ವ-ಸಿದ್ಧಾಂತಗಳು ನೀಡಿದ್ದಾರೆ ಎಂದರು.
ಎಪಿಎಂಸಿ ಅಧ್ಯಕ್ಷ ರತ್ನಾಕರ ಅಮೀನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುರಸಭಾ ಅಧ್ಯಕ್ಷೆ ಸುಮಾ ಅಧ್ಯಕ್ಷತೆವಹಿಸಿದ್ದು, ಪುರಸಭಾ ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್ ಉಪಸ್ಥಿತರಿದ್ದರು.