ಉಡುಪಿ, ಅ. 20(DaijiworldNews/HR): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದು ಇಂತಹ ಕೀಳು ಮಟ್ಟದ ಹೇಳಿಕೆಯ ಮೂಲಕ ತಮ್ಮ ಸಂಸ್ಕಾರ ಏನು ಎನ್ನುವುದನ್ನು ತೋರಿಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಇಂತಹ ಸಂಸ್ಕೃತಿ ಹೀನ ಹೇಳಿಕೆ ನೀಡಿರುವ ಅವರಿಗೆ ಅವರ ಆರೆಸ್ಸೆಸ್ ಶಾಖೆಯಲ್ಲಿ ಕಲಿಸಿರುವ ಸಂಸ್ಕಾರ ಇದೇನಾ ಎನ್ನುವುದು ಅವರು ತಿಳಿಸಬೇಕು. ಸದಾ ಸಂಸ್ಕೃತಿ ಆಚಾರ ವಿಚಾರ ಎಂದು ಹೇಳುವ ಬಿಜೆಪಿಗರ ನಿಜವಾದ ಸಂಸ್ಕೃತಿ ಸಂಸ್ಕಾರ ಮತ್ತು ಸಂಸ್ಕೃತಿಯೇನು ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ. ರಾಜಕೀಯದಲ್ಲಿ ಟೀಕೆಗಳು ಸರ್ವೆಸಾಮಾನ್ಯ ಆದರೆ ಅದು ಸಭ್ಯತೆಯನ್ನು ಮೀರುವುದು ಸರಿಯಲ್ಲ. ರಾಹುಲ್ ಗಾಂಧಿ ಒರ್ವ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ನಾಯಕನಾಗಿದ್ದು ಎಂದೂ ಕೂಡ ತನ್ನ ವಿರೋಧ ಪಕ್ಷದವರ ಕುರಿತು ಎಂದಿಗೂ ಕೂಡ ಸಭ್ಯತೆ ಸಂಸ್ಕಾರ ಮೀರಿ ಹೇಳಿಕೆ ನೀಡಿಲ್ಲ" ಎಂದರು.
ಇನ್ನು "ಇತ್ತೀಚೆಗೆ ತಮ್ಮ ಪಕ್ಷದ ಐಟಿ ವಿಭಾಗ ಮೋದಿಯವರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದ ವೇಳೆ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅದನ್ನು ಅಳಿಸಿ ಹಾಕುವಂತೆ ಹೇಳಿರುವುದು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ತನ್ನ ವಿರೋಧ ಪಕ್ಷಕ್ಕೆ ಯಾವ ರೀತಿಯಲ್ಲಿ ಗೌರವ ನೀಡುತ್ತಾರೆ ಎನ್ನುವುದನ್ನು ಬಿಜೆಪಿಗರು ಕಲಿಯಬೇಕಾಗಿದೆ.
ರಾಹುಲ್ ಗಾಂಧಿಯವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ ಆದರೆ ಎಂದೂ ಕೂಡ ಮೋದಿಯವರ ವಿರುದ್ದ ಯಾವುದೇ ರೀತಿಯ ಹಗುರವಾದ ಹೇಳಿಕೆ ನೀಡಿಲ್ಲ. ಆದರೆ ಬಿಜೆಪಿ ನಾಯಕರು ಬಾಲಿಶತನ ಹಾಗೂ ಜೋಕರ್ ಹೇಳಿಕೆ ನೀಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಸಂಸ್ಕೃತಿ ಜೋಕರ್ ಸಂಸ್ಕೃತಿಯತ್ತ ಸಾಗಿದೆ. ರಾಹುಲ್ ಗಾಂಧಿಯವರ ವಿರುದ್ದ ಅಸಂಸದೀಯ ಪದಗಳಿಂದ ನಿಂದಿಸಿರುವ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು. ಅಲ್ಲದೆ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಸದ ಸ್ಥಾನ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು" ಎಂದು ಅವರು ಆಗ್ರಹಿಸಿದ್ದಾರೆ.