ಉಪ್ಪಿನಂಗಡಿ, ಅ.20 (DaijiworldNews/PY): ರಸ್ತೆಯ ವಿರುದ್ದ ದಿಕ್ಕಿನಲ್ಲಿ ಅತಿ ವೇಗವಾಗಿ ಬಂದ ಟೆಂಪೋವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹ ಸವಾರ ಗಾಯಗೊಂಡ ಘಟನೆ ಅ.19ರ ಮಂಗಳವಾರ ಉಪ್ಪಿನಂಗಡಿಯ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ನಡೆದಿದೆ.
ಮೃತ ದ್ವಿಚಕ್ರ ಸವಾರನನ್ನು ಮಂಗಳೂರಿನ ಕುಂಟಲ್ಪಾಡಿಪದವು ನಿವಾಸಿ ಸಚಿನ್ (29) ಎಂದು ಗುರುತಿಸಲಾಗಿದೆ. ಈತನೊಂದಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿಯ ಅಂಕಿತ್ ಗಾಯಗೊಂಡಿದ್ದು, ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಮೀನು ಸಾಗಾಟದ ಟೆಂಪೋ ವಿರುದ್ದ ದಿಕ್ಕಿನಲ್ಲಿ ಬಂದಿದ್ದು, ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು, ಸಚಿನ್ ತಲೆಯ ಮೇಲೆ ಟೆಂಪೋದ ಚಕ್ರಗಳು ಹರಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಟೆಂಪೋ ಹೆದ್ದಾರಿಯ ಬದಿಯ ಚರಂಡಿಗೆ ಇಳಿದಿದೆ.
ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.