ಬಂಟ್ವಾಳ, ಅ. 19 (DaijiworldNews/SM): ಹೇರಿಗೆ ನೋವು ಹಿನ್ನೆಲೆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆ ಆಂಬ್ಯುಲೆನ್ಸ್ ನಲ್ಲಿ ಮಗುವಿಗೆ ಜನನವಾಗಿರುವ ಘಟನೆ ಬಂಟ್ವಾಳದ ಫರಂಗಿಪೇಟೆಯ ಸಮೀಪ ನಡೆದಿದೆ. ಅನಂತಾಡಿ ನಿವಾಸಿ ಸಂದೀಪ್ ಅವರ ಪತ್ನಿ ಸುಪ್ರಿತಾ ಮಗುವಿಗೆ ಜನ್ಮ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ನಿವಾಸಿ ಗರ್ಭಿಣಿಯಾಗಿದ್ದ ಸುಪ್ರಿತಾ ಅವರನ್ನು ಹೆರಿಗೆಗಾಗಿ ೧೦೮ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಫರಂಗಿಪೇಟೆಯ ಸಮೀಪ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಾಣಿ ವ್ಯಾಪ್ತಿಯ 108 ಆ್ಯಂಬುಲೆನ್ಸ್ ಮೂಲಕ ಅನಂತಾಡಿ ನಿವಾಸಿ ಸಂದೀಪ್ ಅವರ ಪತ್ನಿ ಸುಪ್ರಿತಾ ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ಅವರಿಗೆ ನೋವು ಹೆಚ್ಚಾಗಿದ್ದು, ಆ್ಯಂಬುಲೆನ್ಸ್ ನಲ್ಲೇ ಹೆರಿಗೆ ಮಾಡಿಸಲಾಗಿದೆ.
ಆ್ಯಂಬುಲೆನ್ಸ್ ನ ಇಎಂಟಿ ದಿನೇಶ್ ಹಾಗೂ ಪೈಲೆಟ್ ವಿಜಯ್ ವಿಲ್ಸನ್ ಅವರ ಸಹಕಾರದಿಂದ ಹೆರಿಗೆ ಕಾರ್ಯ ನಡೆದಿದ್ದು, ತಾಯಿ- ಮಗು ಸುರಕ್ಷಿತವಾಗಿದ್ದಾರೆ.