ಮಂಗಳೂರು,ಅ 19 (DaijiworldNews/MS): ಕಾನೂನು ವಿದ್ಯಾರ್ಥಿನಿಯರಿಬ್ಬರು, ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್ ರಾಜೇಶ್ ಅವರ ವಿರುದ್ದ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಆರೋಪದಡಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು , ಇದೀಗ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ" ಕಾನೂನು ವಿದ್ಯಾರ್ಥಿನಿಯರಿಬ್ಬರು ಸ್ಥಳೀಯ ವಕೀಲದ ವಿರುದ್ದ ಎರಡು ಪ್ರತ್ಯೇಕ ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ. ನ್ಯಾಯಾವಾದಿ ಅವರ ಬಳಿ ಇಂಟರ್ ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಒಂದು ದೂರು ದಾಖಲಾದರೆ, ಇನ್ನೊಂದು ದೂರಿನಲ್ಲಿ ಸಂತ್ರಸ್ಥೆಯ ಸ್ನೇಹಿತೆ ಕೌನ್ಸಿಲಿಂಗ್ ಹಾಗೂ ಕಾನೂನಿನ ಸಹಾಯ ಮಾಡುತ್ತೇವೆ ಎಂದು ಮಹಿಳಾ ಸಂಘಟನೆ ಎಂದು ಪರಿಚಯಿಸಿ ದಾರಿ ಮದ್ಯೆ ಮೈದಾನಕ್ಕೆ ಕರೆದುಕೊಂಡು ಹೋಗಿ ಬೆದರಿಕೆ ಹಾಗೂ ಬೇಕಾದ ರೀತಿ ಹೇಳಿಕೆ ನೀಡುವಂತೆ ಒತ್ತಡ ಹಾಕಿರುವ ಕುರಿತು ದೂರು ದಾಖಲಾಗಿದೆ.
ತನಿಖೆ ಪಾರದರ್ಶಕವಾಗಿರಬೇಕು ಎಂದು ಹಾಗೂ ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಇದರ ತನಿಖೆಯು ದಕ್ಷಿಣದ ಎಸಿಪಿ ರಂಜಿತ್ ಅವರಿಗೆ ವಹಿಸಲಾಗಿದೆ: ಎಂದು ವಿವರಿಸಿದ್ದಾರೆ. ಇನ್ನೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ "ಮೂರು ದಿನದ ಹಿಂದೆ ಉರ್ವ ಠಾಣೆಯಲ್ಲಿ ನ್ಯಾಯಾವಾದಿ ದುಡ್ಡಿಗಾಗಿ ಯುವತಿ ತನ್ನನ್ನು ಬ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ" ಎಂದು ಆಯುಕ್ತರು ಹೇಳಿದ್ದಾರೆ.
ಆಡಿಯೋ ವೈರಲ್ : ಸಂತ್ರಸ್ತ ಯುವತಿ ಹಾಗೂ ನ್ಯಾಯಾವಾದಿ ಅವರು ನಡೆಸಿದ 11 ನಿಮಿಷ 55 ಸೆಕೆಂಡ್ ಗಳ ಸಂಭಾಷಣೆ ವೈರಲ್ ಆಗಿದ್ದು, ಸತ್ರಸ್ತೆಯೊಂದಿಗೆ ವಕೀಲ ಮಾತನಾಡುತ್ತಾ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನನ್ನನ್ನು ಕ್ಷಮಿಸು. ಮತ್ತೆ ಇಂಟರ್ ಶಿಫ್ ಗಾಗಿ ಕಚೇರಿಗೆ ಬರುವಂತೆ ಒತ್ತಾಯಿಸಿದ್ದು . ಇದಕ್ಕೆ ಸಂತ್ರಸ್ತೆ ನಾನು ನಿಮ್ಮ ಮುಖ ನೋಡೋದಿಲ್ಲ. 2 ಹೆಣ್ಣು ಮಕ್ಕಳ ತಂದೆಯಾಗಿ ನೀವು ಮಾಡಿದ್ದು ತಪ್ಪು ಎಂಬುದಾಗಿ ಆಕ್ಷೇಪಿಸಿರುವ ಸಂಭಾಷಣೆಗಳಿವೆ.
ವಕೀಲರಿಂದ ವಿಡಿಯೋ ಬಿಡುಗಡೆ: ಸಂತ್ರಸ್ತೆ ಎನ್ನಲಾದ ವಿದ್ಯಾರ್ಥಿನಿ ಮಾಡಿದ ಆರೋಪಗಳನ್ನು ರಾಜೇಶ್ ನಿರಾಕರಿಸಿದ್ದು, ಇಂತಹ ಪ್ರಕರಣ ನಡೆದೇ ಇಲ್ಲ. ಇದೊಂದು ತನ್ನ ವಿರುದ್ದ ಮಾಡಿರುವ ತುಂಬಾ ಜನ ಸೇರಿ ಮಾಡಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ದೂರುದಾರೆ ಯುವತಿ ಘಟನೆ ನಡೆದಿದೆ ಎನ್ನಲಾದ ಬಳಿಕವೂ ತನ್ನ ಕಚೇರಿಗೆ ಮೂರು ನಾಲ್ಕು ಬಾರಿ ಬಂದು ಹೋಗಿದ್ದಾರೆ. ಯುವತಿಯರಿಬ್ಬರು, ನನ್ನಿಂದ ಹಣ ವಸೂಲು ಮಾಡಲು ಹಾಗೂ ನನ್ನ ಮಾನ ಹಾನಿ ಮಾಡಲು ಮಾಡಿರುವ ಕೃತ್ಯವಾಗಿದ್ದು, ನಾನು ಈ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.