ಕಾರ್ಕಳ, ಅ.18 (DaijiworldNews/PY): "ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಒಂದು ಸೀಮಿತ ಪ್ರದೇಶಕ್ಕೆ ಸೀಮಿತಗೊಳಿಸದೆ ಜನರ ನಡುವೆ ಕೊಂಡೊಯ್ಯುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಿನ ದಿನಗಳಲ್ಲಿ ಮಾಡಲಿದೆ. ರಾಜ್ಯೋತ್ಸವವನ್ನು ದಿನಕ್ಕೆ ಸೀಮಿತಗೊಳಿಸದೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿದ್ದು, ನಾಡಿನಾದ್ಯಂತ ನಡೆಸಲು ಉದ್ದೇಶಿಸಿರುವ ಹೊಸ ಕಾರ್ಯಕ್ರಮವನ್ನು ಅ. 24 ರಂದು ರಾಜ್ಯದಲ್ಲಿ ಘೋಷಿಸಲಾಗುವುದು" ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ನಗರದ ಹೊಟೇಲ್ ಪ್ರಕಾಶ್ನ ಉತ್ಸವ ಸಭಾಂಗಣದಲ್ಲಿ ದಿ. ಪ್ರೋ.ಎಂ ರಾಮಚಂದ್ರ ವೇದಿಕೆಯಲ್ಲಿ ಅ.16ರ ಶನಿವಾರ ನಡೆದ ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ವರುಷ-ಹರ್ಷ 2021-22 ಬೆಳ್ಳಿ ಹಬ್ಬ ವರ್ಷಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
"ರಾಜ್ಯೋತ್ಸವ ಪ್ರಶಸ್ತಿಗೆ ಹಿಂದಿನ ವರುಷ 2 ಸಾವಿರ ಅರ್ಜಿಗಳು ಬಂದಿತ್ತು. ಈ ಬಾರಿ 28ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ 66 ಮಂದಿಯನ್ನು ಆಯ್ಕೆಗೊಳಿಸುವುದು ಸವಲಾಗಿದೆ. ಸವಾಲಿನ ನಡುವೆ ಒಳ್ಳೆಯ ಸಾಧಕರನ್ನು ಗುರುತಿಸುವ ಕೆಲಸ ಆಗಲಿದೆ. ಯುವ ಸಾಹಿತಿಗಳನ್ನು ಪ್ರೇರೆಪಿಸುವ ಕೆಲಸ ಇಲಾಖೆ ನಡೆಸಲಿದೆ" ಎಂದರು.
"ಮಂಗಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಶ್ರೀಗಳು ಆಶಿರ್ವಚನ ನೀಡಿ, ಸಾಹಿತ್ಯ ಎಂದರೆ ಆಧ್ಯಾತ್ಮ. ಸಮಾಜ ಬದಲಾವಣೆಯ ಶಕ್ತಿ ಸಾಹಿತ್ಯಕ್ಕಿದೆ. ಸಂಸ್ಕೃತಿಗೆ ಪೂರಕವಾದ ಉತ್ಕೃಷ್ಟ ಸೇವೆ ಸಾಹಿತ್ಯ ಸಂಘದಿಂದ ನಿರಂತರವಾಗಿ ಜರಗಲಿ" ಎಂದು ಹಾರೈಸಿದರು.
ಮುಂಬಯಿ ವಿವಿ.ಯ ಕನ್ನಡ ವಿಭಾಗ ವಿಶ್ರಾಂತ ಪ್ರಾಧ್ಯಾಪಕ ಡಾ. ವಸಂತಕುಮಾರ್ ತಾಳ್ತಜೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶಿವಮೊಗ್ಗದ ಜಿ.ಎಸ್ ನಟೇಶ್ ಮಂಕುತಿಮ್ಮನ ಕಗ್ಗದಲ್ಲಿ ಸಮನ್ವಯದ ಬದುಕು ಕುರಿತು ಉಪನ್ಯಾಸ ನೀಡಿದರು. ಬೆಳ್ಳಿ ಹಬ್ಬ ವರ್ಷಾಚರಣೆ ಸಮಿತಿ ಅಧ್ಯಕ್ಷ ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಡಾ.ಎಂ ಮೋಹನ ಆಳ್ವ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ಕೆ.ಪಿ ಶೆಣೈ ಸಾಹಿತ್ಯ ಸಂಘ ನಡೆದು ಬಂದ ಹಾದಿ ಕುರಿತು ಬೆಳಕು ಚೆಲ್ಲಿದರು.
ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ತುಕಾರಾಮ ನಾಯಕ್, ಪ್ರ.ಕಾರ್ಯದರ್ಶಿ ಪದ್ಮನಾಭ ಗೌಡ, ಕೋಶಾಧಿಕಾರಿ ನಿತ್ಯಾನಂದ ಪೈ, ಉಪಸ್ಥಿತರಿದ್ದರು.
ಸಮಿತಿ ಸದಸ್ಯರು ಪೋಷಕರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಸಚಿವರನ್ನು ಸಮ್ಮಾನಿಸಲಾಯಿತು. ಮುನಿರಾಜ ರೆಂಜಾಳ ನಿರೂಪಿಸಿದರು.