ಉಪ್ಪಿನಂಗಡಿ, ಅ 18(DaijiworldNews/MS): ಇಲ್ಲಿನ ನೇತ್ರಾವತಿ ನದಿಗೆ ಹಾರಿ ವೃದ್ಧರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.18 ರ ಸೋಮವಾರ ಬೆಳಗ್ಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಗೇರುಕಟ್ಟೆಯ ಪರಪ್ಪು ನಿವಾಸಿ ಮುತ್ತಪ್ಪ ಶೆಟ್ಟಿ (70) ಎಂದು ಗುರುತಿಸಲಾಗಿದೆ.
ಅವರು ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯಲ್ಲಿರುವ ನೇತ್ರಾವತಿ ಸೇತುವೆಯ ಬಂದು ಮುಖ ಕಣ್ಣು ಸಹಿತ ತಲೆಯ ತನಕ ಬಟ್ಟೆ ಸುತ್ತಿಕೊಂಡು ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಣೆಗೆ ಯತ್ನಿಸಿದ ಸ್ಥಳೀಯರು:
ಉರುವಾಲು ನಿವಾಸಿಗಳಾದ ಹಂಝ ಮತ್ತು ಅಶ್ರಫ್ ಎಂಬವರು ಕಾರಿನಲ್ಲಿ ಸೇತುವೆ ಮೇಲಿಂದ ಹಾದು ಹೋಗುತ್ತಿದ್ದಾಗ ವೃದ್ಧರೋರ್ವರು ಸೇತುವೆಯಿಂದ ನದಿಗೆ ಹಾರುವುದನ್ನು ನೋಡಿ , ತಕ್ಷಣ ಕಾರು ನಿಲ್ಲಿಸಿ, ಸೇತುವೆಯ ಇನ್ನೊಂದು ತುದಿಯಲ್ಲಿ ಇದ್ದ ಯು.ಟಿ. ಫಯಾಝ್ ಮತ್ತು ರಶೀದ್ ಕಡವಿನಬಾಗಿಲು ಎಂಬವರಿಗೆ ಮಾಹಿತಿ ನೀಡಿದ್ದು, ಈ ನಾಲ್ವರೂ ನದಿಗೆ ದುಮುಕಿ ನದಿ ನೀರಿನಲ್ಲಿ ಹುಡುಕಾಟ ನಡೆಸಿದ್ದರು.
ನದಿಗೆ ಹಾರಿದ್ದ ವೃದ್ಧ ನೀರಿನ ಆಳಕ್ಕೆ ಹೋಗಿ ಮತ್ತೆ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಗಮನಿಸಿದ ಇವರು ಈಜುತ್ತಲೇ ಹೋಗಿ ವೃದ್ಧನನ್ನು ಹಿಡಿದು ರಕ್ಷಿಸಲು ಪ್ರಯತ್ನಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಬಳಿಕ ಅವರು ಮೃತದೇಹವನ್ನು ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ತಂದು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಪ್ರಕರಣ ದಾಖಲಿಸಿದ್ದಾರೆ.