ಉಡುಪಿ, ಅ. 17 (DaijiworldNews/SM): ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಲ್ಲಿ ಮೀನುಗಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ದಿಪಡಿಸಲು 7.5 ಕೋಟಿ ರೂ ಅನುದಾನ ನೀಡುವ ನೂತನ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ವಾರ್ತಾ ಮತ್ತು ಪ್ರಚಾರ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಹೇಳಿದರು. ಅವರು ಇಂದು ಮಲ್ಪೆ ಬಂದರಿಗೆ ಭೇಟಿ ನೀಡಿ,ಮೀನುಗಾರರರೊಂದಿಗೆ ನಡೆದ ಸಂವಾದ ನಡೆಸಿ, ಮಾತನಾಡಿದರು.
ಕೇಂದ್ರ ಸರ್ಕಾರದ ಮೂಲಕ, ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಮೀನುಗಾರರಿಗೆ ಅಗತ್ಯ ಮೂಲಭೂತ ಸೌಕರ್ಯ ಮೀನುಗಾರಿಕಾ ಚಟುವಟಿಕೆ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ದಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳಲು 7.5 ಕೋಟಿ ರೂ ಗಳನ್ನು ನೀಡಲಾಗುವುದು, ಮೀನುಗಾರರ ಗ್ರಾಮಗಳನ್ನು ಗುರುತಿಸುವ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕದಲ್ಲಿ ಮೀನುಗಾರಿಕಾ ಚಟುವಟಿಕೆಗಳ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರದಿಂದ ಮುಂದಿನ 5 ವರ್ಷದಲ್ಲಿ 725 ಕೋಟಿ ರೂಗಳ ಹೊಡಿಕೆ ಮಾಡಲಾಗುವುದು. ಹೆಜಮಾಡಿಯಲ್ಲಿ ಬಂದರು ನಿರ್ಮಣ ಕಾರ್ಯಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ. ಮೀನುಗಾರರ ಮಹಿಳೆಯರಿಗೆ ಸಮುದ್ರ ಪಾಚಿ ಬೆಳೆಸುವ ಯೋಜನೆ ರೂಪಿಸಲಾಗಿದ್ದು, ಈ ಮೂಲಕ ಆರ್ಥಿಕ ಸಬಲತೆ ನೀಡಲಾಗಿದೆ.
ದೇಶದ 5 ಬಂದರುಗಳನ್ನು ಅಂತರಾಷ್ಟ್ರೀಯ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಂದರುನಲ್ಲಿ ಮೀನುಗಾರರಿಗೆ ಅಗತ್ಯ ಮೂಲ ಸೌಕರ್ಯ, ಆಸ್ಪತ್ರೆ, ಐಸ್ ಪ್ಲಾಂಟ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು. ದೇಶದ ಮೀನುಗಾರಿಕ ಕ್ಷೇತ್ರಕ್ಕೆ ಮೂಲ ಸೌಲಭ್ಯ ಒದಗಿಸಲು ಮತ್ತು ಸಮಗ್ರ ಅಭಿವೃಧಿಗೆ ಹಾಗೂ ಮೀನುಗಾರರ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂದರು.