ಬಂಟ್ವಾಳ, ಅ.16 (DaijiworldNews/HR): ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ನಿಟ್ಟಿನಲ್ಲಿ ಕಲ್ಲಡ್ಕದಲ್ಲಿ ಫೈ ಓವರ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು, ಕಟ್ಟಡಗಳ ತೆರವು ಕಾರ್ಯಕ್ಕೆ ವೇಗ ದೊರಕಿದ್ದು, ರಾಷ್ಟ್ರೀಯ ಹೆದ್ದಾರಿಯು ಭೂ ಸ್ವಾಧೀನಕ್ಕೆ ಗುರುತಿಸಲಾದ ಬಹುತೇಕ ಕಟ್ಟಡಗಳು ನೆಲಸಮಗೊಂಡಿದೆ.
ಬಿ.ಸಿ.ರೋಡು- ಅಡ್ಡಹೊಳೆ ಮಧ್ಯದ 64 ಕಿ.ಮೀ. ಚತುಷ್ಪಥ ಹೆದ್ದಾರಿಯ ಕಾಮಗಾರಿ 2 ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ ಕಾಮಗಾರಿ ಆರಂಭಕ್ಕೆ ಮುನ್ನ ನಡೆಯಬೇಕಾದ ಪೂರ್ವಭಾವಿ ಪ್ರಕ್ರಿಯೆಗಳು ಆರಂಭಗೊಂಡಿದೆ. ಕಲ್ಲಡ್ಕದಿಂದ ಮೆಲ್ಕಾರ್ ವರೆಗೂ ಈ ಪ್ರಕ್ರಿಯೆಗಳು ನಡೆಯುತ್ತಿದೆ. ಅಡ್ಡಹೊಳೆಯಿಂದ ಪೆರಿಯಶಾಂತಿ ಹಾಗೂ ಪೆರಿಯಶಾಂತಿಯಿಂದ ಬಿ.ಸಿ.ರೋಡುವರೆಗೆ ಎರಡು ಹಂತದ ಕಾಮಗಾರಿ ನಡೆಯಲಿದ್ದು, ಕಲ್ಲಡ್ಕದಲ್ಲಿ ಫೈ ಓವರ್ ನಿರ್ಮಾಣವಾಗಲಿದೆ.ಕಲ್ಲಡ್ಕ ಪೇಟೆಯ ಹೆಚ್ಚಿನ ಕಟ್ಟಡಗಳು ಹೆದ್ದಾರಿಗಾಗಿ ತೆರವುಗೊಳ್ಳಲಿದ್ದು, ಅವುಗಳನ್ನು ಸ್ಥಳಾಂತರಗೊಳಿಸುವ ಕಾಮಗಾರಿಯೂ ನಡೆಯುತ್ತಿದೆ. ಕೆಲವು ಹಳೆಯ ಕಟ್ಟಡಗಳ ಹಿಂಭಾಗದಲ್ಲಿ ಹೊಸ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದರೆ, ಮತ್ತೆ ಕೆಲವು ಪೇಟೆಯಿಂದ ಹೊರಭಾಗದಲ್ಲಿ ನಿರ್ಮಾಣವಾಗುತ್ತಿದೆ.
ಇನ್ನು ಕಲ್ಲಡ್ಕದ ಹಳೆಯ ಕೆಟಿ ಹೋಟೆಲ್, ಶಿಲ್ಪಾ ಗೊಂಬೆ ಬಳಗದ ಕಚೇರಿ, ಮನೆ, ಧಾರ್ಮಿಕ ಇತಿಹಾಸವಿದ್ದ ಮಹಮ್ಮಾಯಿ ಕಟ್ಟೆ, ಬಟ್ಟೆ ವ್ಯಾಪಾರ ದಲ್ಲಿ ಛಾಪನ್ನು ಮೂಡಿಸಿದ್ದ ಸೋಜಾ ಜವುಳಿ ಮಳಿಗೆ, ಸೋಜಾ ಮೆಟಲ್ ಸ್ಟೋರ್, ಹಳೆಯ ಬಸ್ ನಿಲ್ದಾಣ, ಮಾಜಿ ಶಾಸಕರ ಕಟ್ಟಡದ ಲ್ಲಿದ್ದ ವಿಜಯ ಬ್ಯಾಕ್, ಗೋಪಾಲ ಜವಳಿ ಅಂಗಡಿ, ಕಲ್ಲಡ್ಕ ರೈಸ್ ಮಿಲ್, ಶಿಲ್ಪಾ ವಾಚ್ ಅಂಗಡಿ ಹೀಗೆ ಹಲವಾರು ಅಂಗಡಿಗಳು ಧರಶಾಹಿಯಾಗಿವೆ.
ಕೆಲವೊಂದು ಅಂಗಡಿಗಳು ಇತಿಹಾಸದ ಪುಟಗಳಲ್ಲಿ ಅಚ್ಚಾದರೆ ಹೆಚ್ಚಿನ ಅಂಗಡಿಗಳು ಅಲ್ಲೇ ಹಿಂಬದಿಯಲ್ಲಿ ತಲೆ ಎತ್ತಿ ನಿಲ್ಲಲಿದೆ.