ಮಂಗಳೂರು, ಅ.16 (DaijiworldNews/HR): ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ನಾರಾಯಣ ರೈ ಅವರನ್ನು ತಕ್ಷಣ ಬಂಧಿಸುವಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯರು, ಅಪ್ರಾಪ್ತ ವಯಸ್ಸಿನ ಬಾಲಕಿಯ ಕುಟುಂಬ ಅಲ್ಲಿನ ಭೂ ಮಾಲಕ, ಆರ್ಎಸ್ಎಸ್ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಾಗೂ ಈಶ್ವರಮಂಗಲದ ಪ್ರೌಢಶಾಲೆಯೊಂದರ ಆಡಳಿತ ಮಂಡಳಿಯ ಸಂಚಾಲಕರ ಮನೆಗೆ ತೋಟದ ಕೆಲಸಕ್ಕೆ ಹೋಗುತ್ತಿತ್ತು. ಬಾಲಕಿಯ ಮನೆಯವರ ಅಸಹಾಯಕ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಆರೋಪಿ ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ ಆಕೆ ಮಗುವಿಗೆ ಜನನ ನೀಡುವುದಕ್ಕೆ ಕಾರಣವಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ದೂರಿನಲ್ಲಿ ನಾರಾಯಣ ರೈ ಅವರ ಹೆಸರನ್ನು ನಮೂದಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಸಮಿತಿಯು ಹೇಳಿದೆ. ಮೊದಲ ಮಾಹಿತಿ ವರದಿಯಲ್ಲಿ ಪೊಲೀಸರು, ರೈಯವರನ್ನು ರಕ್ಷಿಸುವ ನಿರ್ದಿಷ್ಟ ಉದ್ದೇಶದಿಂದ ಆರೋಪಿಗಳ ಹೆಸರನ್ನು ಪ್ರಮೋದ್ ಎಂದು ಉಲ್ಲೇಖಿಸಿದ್ದಾರೆ ಎಂದು ಸಮಿತಿ ಹೇಳಿದೆ.
ಇನ್ನು ರೈ ಅವರನ್ನು ತಕ್ಷಣ ಬಂಧಿಸಬೇಕು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪುತ್ತೂರು ಗ್ರಾಮಾಂತರ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಆರೋಪಿ ಮತ್ತು ನೊಂದ ಬಾಲಕಿಯ ಡಿಎನ್ ಎ ಪರೀಕ್ಷೆ ನಡೆಸುವಂತೆ ಸಂಘಟನೆ ಆಗ್ರಹಿಸಿದೆ. ಈ ಬೇಡಿಕೆಗಳನ್ನು ಈಡೇರಿಸಲು ವಿಳಂಬವಾದರೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಸಂಪ್ಯದಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ವ್ಯವಸ್ಥೆ ಮಾಡುತ್ತದೆ ಎಂದು ನಾಯಕರು ಎಚ್ಚರಿಸಿದ್ದಾರೆ.
ಸಮನ್ವಯ ಸಮಿತಿಯ ಮುಖಂಡರಾದ ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ ರಘು ಕೆ ಎಕ್ಕಾರು, ಸರೋಜಿನಿ ಬಂಟ್ವಾಳ, ಯುಕೆ ಗಿರೀಶ್ ಕುಮಾರ್, ಆನಂದ್ ಬೆಳ್ಳಾರೆ, ಸುಧಾಕರ್ , ಕಮಲಾಕ್ಷ ಬಜಾಲ್ ಮತ್ತು ಗಣೇಶ್ ಉಪಸ್ಥಿತರಿದ್ದರು.