ಜಡ್ಕಲ್, ಅ.16 (DaijiworldNews/HR): ಜಿಲ್ಲಾಡಳಿತ ಗ್ರಾಮಕ್ಕೆ ತೆರಳುವ ಕಾರ್ಯಕ್ರಮ ಕೊರೊನಾದಿಂದಾಗಿ ಸ್ತಗಿತವಾಗಿದ್ದು ಇದೀಗ ಉಡುಪಿ ಜಿಲ್ಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಕೇಂದ್ರದಿಂದ ದೂರದಲ್ಲಿರುವ ಜಡ್ಕಲ್ ಗ್ರಾಮದಲ್ಲಿ ಪುನರಾರಂಭವಾಗುತ್ತಿದೆ. ಜಿಲ್ಲಾಡಳಿತವೇ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕರ ಸಮಸ್ಯೆ, ಸಲಹೆಗಳಿಗೆ ಸ್ಪಂದನೆ, ಸಮಸ್ಯೆಗಳಿಗೆ ವ್ಯವಸ್ಥಿತವಾಗಿ ಪರಿಹಾರ ಮಾರ್ಗಸೂಚಿಸುವ ಕಾರ್ಯಕ್ರಮ ಇದಾಗಿದೆ. ಕಟ್ಟಕಡೆಯ ವ್ಯಕ್ತಿಯೂ ಕೂಡಾ ಇಲ್ಲಿ ಅಹವಾಲು ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶವಿದ್ದು ಈ ಅಭಿಯಾನ ಇಲ್ಲಿ ಆಗುತ್ತಿರುವುದು ಅರ್ಥಪೂರ್ಣ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದರು.
ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿನಪಾರೆಯಲ್ಲಿರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳೆ ಕಡೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಜಡ್ಕಲ್ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹಲವು ಅಂಶಗಳು ಪೂರಕವಾಗುತ್ತವೆ. ಇದು ಪ್ರಕೃತಿದತ್ತವಾದ ಸುಂದರ ಗ್ರಾಮ. ಹಳ್ಳಿಯ ಶಾಲೆಗಳು, ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ನೆಡೆಯುತ್ತಿರುವ ಅಭಿವೃದ್ದಿ ಕಾರ್ಯಕ್ರಗಳು ಗಮನಾರ್ಹವಾಗಿದೆ. ಇಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಬೇಡಿಕೆಗಳು, ಇಲಾಖಾ ಮಟ್ಟದಿಂದ ಆಗಬೇಕಾದ ಕೆಲಸಗಳು, ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತದ ಮೂಲಕ ಆಗಬೇಕಾದ ಕಾರ್ಯಗಳನ್ನು ಜೋಡಣೆ ಮಾಡಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು" ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಮಾತನಾಡಿ, ಜಡ್ಕಲ್ ಮುದೂರು ಎರಡು ಗ್ರಾಮಗಳನ್ನು ಒಳಗೊಂಡ ದೊಡ್ಡ ಪಂಚಾಯಿತಿ ಆಗಿದ್ದು ಮುದೂರು ಗ್ರಾಮಕ್ಕೆ ಪಂಚಾಯಿತಿ ಕಟ್ಟಡಕ್ಕೆ ಸ್ಥಳವನ್ನು ಗುರುತಿಸಿ ಕಾಯ್ದಿರಿಸುವ ಕೆಲಸ ಆಗಬೇಕು. ಜಡ್ಕಲ್ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಸ್ಥಳವನ್ನು ಗುರುತು ಪಡಿಸಿ ಗ್ರಾ.ಪಂ. ವಶಕ್ಕೆ ನೀಡಬೇಕು, ಜಡ್ಕಲ್ ಮುದೂರು ಬಹು ವಿಸ್ತ್ರತ ಹಾಗೂ ಕುಗ್ರಾಮಗಳನ್ನು ಒಳಗೊಂಡ ಗ್ರಾಮವಾದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ. 94ಸಿ ಅರ್ಜಿ ಸಲ್ಲಿಸಿ ಫಲಾನುಭವಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು ಮಂಜೂರಾತಿ ನೀಡುವ ಕೆಲಸ ಆಗಬೇಕು, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ, ಎಸ್.ಆರ್.ಟಿ ಪೈಲ್ಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಕಾರ್ಯ ಆಗಬೇಕು.ಎಸ್.ಎಲ್.ಆರ್.ಎಂ ಘಟಕ ನಿರ್ಮಾಣಕ್ಕೆ ಈ ಹಿಂದೆ ಹಾಲ್ಕಲ್ನಲ್ಲಿ 30 ಸೆಂಟ್ಸ್ ಜಾಗ ಕಾಯ್ದಿರಿಸಿದ್ದು ಪಕ್ಕದಲ್ಲಿ ಪ.ಪಂಗಡದ ಕುಟುಂಬವಿದ್ದು, ಅಲ್ಲಿ ಕಸ ವಿಲೇವಾರಿ ಮಾಡಿದರೆ ಆ ಮುಗ್ದ ಕುಟುಂಬಕ್ಕೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಎಸ್.ಎಲ್.ಆರ್.ಎಂ. ಘಟಕಕ್ಕೆ ಬೇರೆಡೆ ಜಾಗ ಕಾಯ್ದಿರಿಸಬೇಕು ಎನ್ನುವ ಬೇಡಿಕೆ ಪಟ್ಟಿ ಸಲ್ಲಿಸಿದರು.
ವಿಕಲಚೇತರಿಗೆ ಸರ್ಕಾರಿ ಬಸ್ಗಳಲ್ಲಿ 100 ಕಿ.ಮೀ ತನಕ ಬಸ್ಪಾಸ್ ನೀಡಲಾಗುತ್ತಿದ್ದು, ಈ ಭಾಗದಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಡಿಮೆ. ಹಾಗಾಗಿ ವಿಕಲಚೇತನ ಬಸ್ ಸೌಲಭ್ಯ ಖಾಸಗಿ ಬಸ್ಗಳಿಗೂ ಅನ್ವಯಗೊಳಿಸಬೇಕು. ಹಾಗೂ 100 ಕಿ.ಮೀ ವ್ಯಾಪ್ತಿಯನ್ನು ರಾಜ್ಯದ್ಯಂತ ವಿಸ್ತರಿಸಬೇಕು ಎಂದು ಸ್ಥಳೀಯರಾದ ರಾಜು ಪೂಜಾರಿ ಅಹವಾಲು ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ವಿಷಯ ಪ್ರಸ್ತಾವಿಸಲಾಗುವುದು. ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಸರ್ಕಾರಿ ಶಿಕ್ಷಣ ಸಂಸ್ಥೆಗಳಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ರ್ಯಾಂಪ್ ಸಹಿತ ವಿಕಲಚೇತನರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳ ಅನುಷ್ಠಾನಿಸಬೇಕು. ಪಂಚಾಯತ್ಗಳಲ್ಲಿ ವಿಕಲಚೇತನರ ಅಭಿವೃದ್ದಿಗೆ 5% ಅನುದಾನವನ್ನು ಸದ್ವಿನಿಯೋಗಗೊಳಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳನ್ನು ಕೋರಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಕಲಚೇತನ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗುವುದು. 5% ಅನುದಾನ ಪಂಚಾಯತ್ ನಗರ ಸಭೆಗಳಲ್ಲಿ ಸದ್ವಿನಿಯೋಗ ಆಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಆಯುಕ್ತ ಕೆ.ರಾಜು, ಬೈಂದೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಡ್ಕಲ್ ಗ್ರಾ.ಪಂ. ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಾಗಭೂಷಣ ಉಡುಪ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ಜಿ.ಪಂ. ಯೋಜನಾಧಿಕಾರಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ ಮೊದಲಾದವರು ಉಪಸ್ಥಿತರಿದ್ದರು.