ಮಂಗಳೂರು, ಅ 16 (DaijiworldNews/MS):ಕರ್ನಾಟಕ ವಿಧಾನ ಮಂಡಲ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿಯು ತನ್ನ ಇತ್ತೀಚಿಗಿನ ಸಮಿತಿ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಮಿಷನರಿಗಳು ಹಾಗೂ ಕ್ರಿಶ್ಚಿಯನ್ ಸಂಸ್ಥೆಗಳು ನಡೆಸುವ ಕಾರ್ಯ ಚಟುವಟಿಕೆಗಳ ಮೇಲೆ ವರದಿಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ’ಬಿಜೆಪಿ ಸರ್ಕಾರವು ಕ್ರಿಶ್ಚಿಯನ್ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಟೋಬರ್ 16 ರ ಶನಿವಾರ ಇಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಲೋಬೊ, "ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡು ಸಮಿತಿಯು ಧಾರ್ಮಿಕ ಮತಾಂತರದ ಆರೋಪದ ಮೇಲೆ ನಿರ್ಧಾರ ಕೈಗೊಂಡಿದೆ. ಬಿಜೆಪಿಯ ಈ ನಡೆ ಆಧಾರರಹಿತವಾಗಿದೆ. ಯಾರನ್ನೂ ಬಲವಂತವಾಗಿ ಬೇರೆ ಧರ್ಮಕ್ಕೆ ಪರಿವರ್ತಿಸುವುದು ಅಸಾಧ್ಯ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಅಂತಹ ಪ್ರಕರಣಗಳು ಸಂಭವಿಸಿದಲ್ಲಿ, ಕ್ರಮ ಕೈಗೊಳ್ಳಲು ಕೆಲವು ಕಾನೂನುಗಳಿವೆ. ಬಿಜೆಪಿ ನಿರ್ದಿಷ್ಟ ಸಮುದಾಯವನ್ನು ಅನಗತ್ಯವಾಗಿ ಟೀಕಿಸುತ್ತಿದೆ ಎಂದು ಆರೋಪಿಸಿದರು.
ಕ್ರಿಶ್ಚಿಯನ್ ಸಮುದಾಯವು ಶಾಂತಿ ಪ್ರಿಯ ಸಮುದಾಯವಾಗಿದ್ದು, ಇದು ಶಿಕ್ಷಣ, ವೈದ್ಯಕೀಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದೆ. ಶಿಕ್ಷಣ, ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯಲ್ಲಿನ ಫಲಾನುಭವಿಗಳು ಮತಾಂತರಕ್ಕೆ ಒಳಗಾಗಿದ್ದರೆ, ದೇಶದ ಜನಸಂಖ್ಯೆಯ 70% ಕ್ರಿಶ್ಚಿಯನ್ ಧರ್ಮವಾಗಿತ್ತು. ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಸಾಪ್ಟ್ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದರು.
ಸದಸ್ಯರು ಭಾನುವಾರ ಚರ್ಚುಗಳಿಗೆ ಭೇಟಿ ನೀಡಬೇಕು ಎಂದು ಸಮಿತಿಯು ಹೇಳಿದೆ. ದೇವರು ಒಬ್ಬನೇ ಆಗಿರುವುದರಿಂದ ಚರ್ಚುಗಳ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಉತ್ತಮ ಉದ್ದೇಶದೊಂದಿಗೆ ಚರ್ಚುಗಳಿಗೆ ಭೇಟಿ ನೀಡುವುದು ಯಾವಾಗಲೂ ಸ್ವಾಗತಾರ್ಹ, ಎಂದು ಅವರು ಹೇಳಿದರು.