ಮಂಗಳೂರು, ಅ.15 (DaijiworldNews/PY): ಅಕ್ಟೋಬರ್ 14ರ ಗುರುವಾರ ನಡೆದ ಆಯುಧ ಪೂಜೆಯ ಸಂದರ್ಭ ನಗರದ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಬಜರಂಗದಳದ ಕಾರ್ಯಕರ್ತರು ತ್ರಿಶೂಲ ದೀಕ್ಷೆ ನಡೆಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ಧಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, "ನಗರ ಸೇರಿದಂತೆ ವಿವಿಧೆಡೆ ನಡೆದ ಆಯುಧ ಪೂಜೆಯ ವೇಳೆ ವಿಹಿಂಪ, ಬಜರಂಗ ದಳದ ಕಾರ್ಯಕರ್ತರು ತ್ರಿಶೂಲ ದೀಕ್ಷೆ ನಡೆಸಿದ್ದಾರೆ ಎನ್ನುವ ವಿಚಾರ ತಿಳಿದಿದೆ. ತನಿಖೆಯ ಸಂದರ್ಭ, ಇದನ್ನು ಪ್ರತೀ ವರ್ಷ ಆಚರಣೆಯ ರೀತಿಯಲ್ಲಿ ಮಾಡಿರುವುದು ತಿಳಿದುಬಂದಿದೆ. ಇದು ಕಾನೂನಿಗೆ ವಿರುದ್ದವಾಗಿದೆಯೇ ಎಂದು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ" ಎಂದಿದ್ದಾರೆ.
ವಿಹೆಚ್ಪಿ ಮಂಗಳೂರು ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಮಂಗಳೂರು, ಉಡುಪಿ, ಪುತ್ತೂರು ಸೇರಿದಂತೆ ವಿವಿಧೆಡೆ ಆಯುಧ ಪೂಜೆ ನಡೆದಿದ್ದು, ಈ ವೇಳೆ ಬಜರಂಗದಳದ ಕಾರ್ಯಕರ್ತರು ತ್ರಿಶೂಲಗಳಿಗೆ ಪೂಜೆ ಸಲ್ಲಿಸಿ, ಕೈಯಲ್ಲಿ ಹಿಡಿದಿದ್ದರು.