ಬಂಟ್ವಾಳ, ಅ. 14 (DaijiworldNews/SM): ಹೂ ವ್ಯಾಪಾರಿಗೆ ಬೆದರಿಕೆ ಹಾಕಿ ಸಾವಿರಾರು ರೂಪಾಯಿ ಮೌಲ್ಯದ ಹೂವುಗಳನ್ನು ಕಸಿದುಕೊಂಡು ಹೋದ ಘಟನೆ ಬಿ.ಸಿ.ರೋಡಿನ ಮುಖ್ಯ ವೃತ್ತದಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.
ಕುಶಾಲನಗರ ಮೂಲದ ಅಭಿಲಾಷ್ ಅವರು ನವರಾತ್ರಿ ಹಬ್ಬಕ್ಕೆ ರೈತರ ಕೈಯಿಂದ ನೇರವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ಬಿಸಿರೋಡಿಗೆ ಆಗಮಿಸಿದ್ದು ಇಲ್ಲಿನ ಮುಖ್ಯ ವೃತ್ತದ ರಸ್ತೆ ಬದಿಯಲ್ಲಿ ರಿಕ್ಷಾದಲ್ಲಿ ಹೂ ವ್ಯಾಪಾರ ಮಾಡುತ್ತಿದ್ದರು.
ಆದರೆ ಬೆಳಿಗ್ಗೆಯಿಂದಲೇ ಇವರ ವ್ಯಾಪಾರ ಮಾಡುವುದನ್ನು ಹಲವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಆವರು ಆರೋಪ ಮಾಡಿದ್ದಾರೆ. ರಾತ್ರಿ ವೇಳೆ ಕಾರಿನಲ್ಲಿ ಬಂದ ತಂಡವೊಂದು ಅವ್ಯಾಚ್ಚವಾಗಿ ಬೈದು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಆ ಬಳಿಕ ಬೈಕಿನಲ್ಲಿ ಬಂದ ತಂಡವೊಂದು 4 ಸಾವಿರಕ್ಕೂ ಹೆಚ್ಚು ಬೆಲೆಯ ಹೂವುಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.