ಪುತ್ತೂರು, ಅ. 14 (DaijiworldNews/SM): ನವರಾತ್ರಿ ಬಂತೆಂದರೆ ಸಾಕು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ದೇವಿ ಆರಾಧನೆಗಳು ನಡೆದರೆ, ಇನ್ನೊಂಡೆ ವಿವಿಧ ವೇಶಧಾರಿಗಳು ಮನೆ ಮನೆಗೆ ಆಗಮಿಸುವ ಮೂಲಕ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಇಂಥಹುದೇ ಒಂದು ವಿಶೇಷವಾದ ಪ್ರೇತದ ವೇಷದ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ ಹದಿಮೂರು ವರ್ಷಗಳಿಂದ ಗಮನಸೆಳೆಯುತ್ತಿದ್ದಾರೆ. ಇವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ.
ಪುತ್ತೂರಿನಲ್ಲಿ ಅಟೋ ಚಾಲಕನಾಗಿ ದುಡಿಯುತ್ತಿರುವ ದಿವಾಕರ್ ನವರಾತ್ರಿ ಬಂತೆಂದರೆ ಪ್ರೇತವಾಗಿ ಬಿಡುತ್ತಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರೇತದ ವೇಷಧಾರಿಯಾಗುವ ದಿವಾಕರ್, ಪ್ರೇತದಂತೆ ಮನೆ ಮನೆಗೆ, ಅಂಗಡಿ, ಅಂಗಡಿಗೆ ಅರಚಾಡುತ್ತಿರುತ್ತಾರೆ. ಹಲವು ವರ್ಷಗಳಿಂದ ನವರಾತ್ರಿಯಲ್ಲಿ ವೇಷ ಹಾಕುವುದನ್ನು ಕರಗತ ಮಾಡಿಕೊಂಡಿರುವ ದಿವಾಕರ್ ಹಿಂದೆ ರಾಘವೇಂದ್ರ ಸ್ವಾಮಿ ವೇಷ, ಈಶ್ವರನ ವೇಷ, ಕೃಷ್ಣನ ವೇಷ ಹೀಗೆ ದೇವರ ವೇಷಗಳನ್ನು ಹಾಕುತ್ತಿದ್ದರು.
ಆದರೆ ಧಾರ್ಮಿಕ ವೇಷಗಳನ್ನು ಹಾಕಲು ನಿಶೇಧವೇರಿದ ಹಿನ್ನಲೆಯಲ್ಲಿ ವೇಷ ಹಾಕುವುದನ್ನೇ ಬಿಟ್ಟಿದ್ದ ದಿವಾಕರ್ ಗೆ ಕೈಕಾಲುಗಳು ಅಲುಗಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ನವರಾತ್ರಿಗೆ ಯಾವುದಾದರೂ ವೇಷ ಹಾಕಬೇಕೆಂದು ತೀರ್ಮಾನಿಸಿದ ಅವರು ಪ್ರೇತದ ವೇಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ದಿವಾಕರ್ ಅವರ ಪ್ರೇತದ ವೇಷಕ್ಕಾಗಿ ಜನರು ಕಾಯುತ್ತಿರುತ್ತಾರೆ. ಕುಲೆ ದಾನೆ ಬರ್ಪುಜಿ ಕುಲೆ ದಾನೆ ಬರ್ಪುಜಿ ಎನ್ನುತ್ತಾ ಪ್ರೇತ ವೇಶಕ್ಕಾಗಿ ಜನರು ಕಾಯುತ್ತಿರುತ್ತಾರೆ.
ಕಳೆದ ಹದಿಮೂರು ವರ್ಷಗಳಿಂದ ಪ್ರೇತದ ವೇಷವನ್ನು ಹಾಕಿಕೊಂಡು ಜನರನ್ನು ಮನರಂಜಿಸುತ್ತಿರುವ ದಿವಾಕರ್ ಗೆ ಇದರಿಂದ ಹಣ ಮಾಡುವ ಉದ್ದೇಶವಿಲ್ಲ. ಹರಕೆಗಾಗಿ ಈ ವೇಷವನ್ನು ಹಾಕುತ್ತಿದ್ದು, ಜೀವನಕ್ಕಾಗಿ ಸ್ವಂತ ಆಟೋ ವನ್ನು ಅವಲಂಭಿಸಿದ್ದಾರೆ. ಪ್ರೇತದ ವೇಷಕ್ಕಾಗಿ ಪೋಲೀಸರ ಅನುಮತಿಯನ್ನೂ ಪಡೆದಿರುವ ಇವರು ಸಾಯಂಕಾಲ 6 ರ ಬಳಿಕ ತನ್ನ ವೇಷವನ್ನು ಕಳಚುತ್ತಾರೆ. ರಾತ್ರಿಯ ಸಮಯದಲ್ಲಿ ಈ ವೇಷವನ್ನು ಹಾಕಿಕೊಂಡು ತಿರುಗಿದಲ್ಲಿ ಜನ ಬೆಚ್ಚಿಬೀಳುವ ಸಾಧ್ಯತೆಯೂ ಇರುವ ಕಾರಣಕ್ಕಾಗಿ ಈ ರೀತಿಯ ವೇಳಾಪಟ್ಟಿಯನ್ನೂ ಅವರು ತಮ್ಮ ವೇಷದಲ್ಲಿ ಸೇರಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಒಂದು ವಿಶಿಷ್ಟ ಪ್ರೇತದ ವೇಷದ ಮೂಲಕ ನವರಾತ್ರಿ ಸಂದರ್ಭದಲ್ಲಿ ದಿವಾಕರ್ ಅವರು ಜನರನ್ನು ಮನೋರಂಜಿಸುವ ಜೊತೆ ಜೊತೆಗೆ ತಮ್ಮ ಹರಕೆಯನ್ನು ಕೂಡ ತೀರಿಸುಕೊಳ್ಳುತ್ತಿದ್ದಾರೆ.