ಮಂಗಳೂರು, ಅ. 13 (DaijiworldNews/SM): ನಗರದಲ್ಲಿ ಲಸಿಕಾ ಅಭಿಯಾನ ಬಹುತೇಕ ಯಶಸ್ವಿಯಾಗುತ್ತಿದ್ದು, ಇನ್ನೂ ಕೂಡ ಲಸಿಕೆ ಪಡೆಯದವರಿಗಾಗಿ ಅಕ್ಟೋಬರ್ 14 ರಿಂದ 16ರ ತನಕ ನಗರದ ವಿವಿಧೆಡೆಗಳಲ್ಲಿ ಲಸಿಕಾ ಮೇಳವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಸಂಪೂರ್ಣ ಪ್ರಯೋಜನ ಪಡೆಯಬೇಕು. ತಪ್ಪಿದ್ದಲ್ಲಿ ಅಕ್ಟೋಬರ್ 16ರ ಬಳಿಕ ಮಾಲ್ ಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ. ಆದರೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಕೂಡ ಇದೆ.
ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಿ, ಸಂಭಾವ್ಯ ಕೋವಿಡ್ ಮೂರನೇ ಅಲೆಯ ಭೀತಿಯನ್ನು ತಪ್ಪಿಸಲು, ನಗರ ವ್ಯಾಪ್ತಿಯಲ್ಲಿ ಕೋವಿಡ್ ಸಮುಚಿತ ವರ್ತನೆ ಪಾಲನೆಯಾಗುತ್ತಿರುವುದರ ಬಗ್ಗೆ ನಿಗಾವಹಿಸುವುದು ಅನಿವಾರ್ಯವಾಗಿರುತ್ತದೆ. ಈ ನಡುವೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯದವರನ್ನು ಗುರುತಿಸಿ, ಲಸಿಕೆ ಕೊಡಿಸುವ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಅ.14 ರಿಂದ16ರ ವರೆಗೆ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿರುವ ಲಸಿಕಾ ಮೇಳಗಳ ಸಂಪೂರ್ಣ ಲಾಭವನ್ನು ನಾಗರಿಕರು ಪಡೆಯುವಂತೆ ಕೋರಲಾಗಿದೆ.
ತಪ್ಪಿದಲ್ಲಿ ಅ. 16 ರಂದು ಮಾಲ್, ಸಹಿತ ಎಲ್ಲಾ ಸಾರ್ವಜನಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕರಿಗೆ ಲಸಿಕೆ ಪಡೆದ ದಾಖಲೆ ಇಲ್ಲದೆ, ಬೇಕಾಬಿಟ್ಟಿ ಓಡಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.