ಮಂಗಳೂರು, ಅ.13 (DaijiworldNews/HR): ಕೊರೊನಾ ಸೋಂಕಿನ ಮುಂಬರುವ ಸ್ಥಿತಿ ಗತಿಗಳನ್ನು ಪರಾಮರ್ಶಿಸಿ, ಸರಕಾರದ ಪೂರ್ವಾನುಮತಿ ತೆಗೆದುಕೊಂಡು ಈ ಬಾರಿ ಡಿಸೆಂಬರ್ 23 ರಿಂದ ಜನವರಿ 16ರ ವರೆಗೆ ಉಲ್ಲಾಳ ಉರುಸ್ ನಡೆಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಉಲ್ಲಾಳ ಉರುಸ್ ಆಚರಣೆ ಸಂಬಂಧ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉರುಸ್ ಆಚರಣೆಗೆ ಸಂಬಂಧ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ, ಒಂದು ತಿಂಗಳ ನಂತರ ಮತ್ತೊಂದು ಸಭೆ ನಡೆಸಲಾಗುವುದು, ಅದೂವರೆಗಿನ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು ಹಾಗೂ ಕೇರಳದಲ್ಲಿ ಹೆಚ್ಚಿನ ಪ್ರಕರಣಗಳಿದ್ದು, ಹೆಚ್ಚಿನ ಭಕ್ತಾದಿಗಳು ಸಹ ಅಲ್ಲಿಂದ ಆಗಮಿಸುವುದರಿಂದ ಈ ಸ್ಥಿತಿಗಳನ್ನು ಅವಲೋಕಿಸಿ, ಕೋವಿಡ್ ಕಡಿಮೆಯಾದಲ್ಲೀ, ಸರಕಾರದಿಂದ ಪೂರ್ವಾನುಮತಿ ಪಡೆದು, ಡಿಸೆಂಬರ್ ಮಾಹೆಯಿಂದ ನಡೆಸಲಾಗುವುದು, ಒಂದು ವೇಳೆ ಈ ಪರಿಸ್ಥಿತಿಯಲ್ಲಿ ವ್ಯತ್ಯಯವಾದಲ್ಲಿ, ಉರುಸ್ ಅನ್ನು ಮುಂದೂಡಲಾಗುವುದು, ಸರಕಾರಕ್ಕೆ ಈ ಬಗ್ಗೆ ವರದಿ ಕಳುಹಿಸಲಾಗುವುದು" ಎಂದು ಹೇಳಿದರು.
"ಪ್ರತಿ ಐದು ವರ್ಷಗಳಿಗೊಮ್ಮೆ ಉಲ್ಲಾಳದ ಉರುಸ್ ಆಚರಿಸಲಾಗುತ್ತಿದೆ, ಅದರಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಯಾವುದೇ ಹೊಸ ಸೋಂಕು ಪತ್ತೆಯಾದಲ್ಲಿ ಅದು ಐದು ವರ್ಷಗಳ ಕಾಲ ಅದರ ಪ್ರಭಾವವಿರುತ್ತದೆ, ಆ ದಿಸೆಯಲ್ಲಿ ಹೆಚ್ಚಿನ ಜಾಗರೂತೆ ಅತಿ ಅಗತ್ಯ. ಉರುಸ್ ಆಚರಣೆ ಸಂಬಂಧ ಹಲವು ಪೂರ್ವ ಸಿದ್ದತೆಗಳನ್ನು ಸಹ ಮಾಡಿಕೊಳ್ಳಬೇಕಿದೆ, ಆ ದಿಸೆಯಲ್ಲಿ ಇದು ಪೂರ್ವಭಾವಿ ಸಭೆಯಾಗಿದೆ" ಎಂದರು.
ಆರೋಗ್ಯ ಇಲಾಖೆ ವತಿಯಿಂದ ಉಲ್ಲಾಳ ಭಾಗದಲ್ಲಿ ಕೋವಿಡ್ ಲಸಿಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು, ಹೆಚ್ಚಿನ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು, ಅಲ್ಲಿ ಹೆಚ್ಚು ಹೆಚ್ಚು ಕೋವಿಡ್ ತಪಾಸಣೆಗಳನ್ನು ಮಾಡಬೇಕು, ಪಾಸಿಟಿವಿಟಿ ರೇಟ್ ಬಗ್ಗೆ ಗಮನವಿರಬೇಕು, ಲಸಿಕಾ ಶಿಬಿರಗಳನ್ನು ಹೆಚ್ಚು ಮಾಡಬೇಕು, ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಬೇಕು, ಆಂಬುಲೆನ್ಸ್ ಅನ್ನು ಸದಾ ಸನ್ನದ ಸ್ಥಿತಿಯಲ್ಲಿಟ್ಟುಕೊಳ್ಳಬೇಕು ಹಾಗೂ ಸುತ್ತಮುತ್ತಲಿನ ಆಸ್ಪತ್ರೆಗಳು, ರೋಗಿಗಳನ್ನು ಉಪಚರಿಸಲು ಸಜ್ಜಾಗಿರಬೇಕು, ಮೆಡಿಕಲ್ ಚೆಕ್ಪೋಸ್ಟ್ ತಂಡವನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಉರುಸ್ ಹಿನ್ನಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಂಡು ಶಾಶ್ವತವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು, ಅದಕ್ಕಾಗಿ ಜಿಲ್ಲಾ ನಗರಾಭಿವೃದ್ದಿ ಕೋಶವು ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯಿಂದ ವಿಶೇಷ ಅನುದಾನಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು, ಉಲ್ಲಾಳ ಪಟ್ಟಣವನ್ನು ಸ್ಪಚ್ಛವಾಗಿಟ್ಟುಕೊಳ್ಳುವುದು ಹಾಗೂ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಕಾಳಜಿ ವಹಿಸುವ ಕೆಲಸಗಳನ್ನು ಮಾಡಬೇಕು, ಪ್ರವಾಸೋದ್ಯಮ ಇಲಾಖೆ ವತಿಯಿಂದ ಉಲ್ಲಾಳ ವ್ಯಾಪ್ತಿಯಲ್ಲಿನ ಬೀಚ್ ಅನ್ನು ಅಭಿವೃದ್ದಿ ಪಡಿಸುವ ಕೆಲಸ ಮಾಡಬೇಕು, ಸಂಪರ್ಕ ರಸ್ತೆಗಳು, ತಾತ್ಕಾಲಿಕ ಶೌಚಾಲಯಗಳು ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು, ಇದಕ್ಕಾಗಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಅವರು ನಿರ್ದೇಶನ ನೀಡಿದರು.
ವಿದ್ಯುತ್ಚ್ಛಕ್ತಿ ಸರಭರಾಜು ಮಾಡುವ ತಂತಿಗಳಲ್ಲಿ ವ್ಯತ್ಯಾಸಗಳು ಹಾಗೂ ಲೋಪಗಳಿದ್ದಲ್ಲಿ ಅವುಗಳನ್ನು ಮೆಸ್ಕಾಂನಿಂದ ಸರಿಪಡಿಸಿಕೊಳ್ಳಬೇಕು, ಉರುಸ್ ವೇಳೆ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು ಎಂದರು.
ಭದ್ರತೆಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿಯವರು, ದಿನದ 24 ಗಂಟೆಗಳು ಅಲ್ಲಿ ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು, ಮಹಿಳಾ ಪೋಲಿಸ್ ಪೇದೆಗಳನ್ನು ಕರ್ತವ್ಯದಲ್ಲಿ ನಿಯೋಜಿಸಬೇಕು, ಗೃಹರಕ್ಷಕ ದಳವನ್ನು ಸಹ ನಿಯೋಜಿಸಿಕೊಳ್ಳಬಹುದಾಗಿದೆ, ಬೀಟ್ ಪೋಲಿಸರು ಕೂಡ ತಮ್ಮ ಕರ್ತವ್ಯವನ್ನು ಈ ವೇಳೆ ನಿರ್ವಹಿಸಬೇಕು, ಮುಖ್ಯವಾಗಿ ಸಂಚಾರಿ ದಟ್ಟಣೆಯನ್ನು ನಿಯಂತ್ರಿಸಲು ಅಗತ್ಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕು, ಸಿಸಿಟಿವಿಗಳ ಅಳವಡಿಕೆಯಾಗಬೇಕು ಎಂದು ನಿರ್ದೇಶನ ನೀಡಿದರು.
ಅಗ್ನಿಶಾಮಕ ದಳದಿಂದ ಅಗ್ನಿಶಮನ ವಾಹನಗಳು, ಪ್ರವಾಸಿಗರ ಅನುಕೂಲಕ್ಕೆ ಬಸ್ಗಳ ವ್ಯವಸ್ಥೆ, ಉರುಸ್ ವೇಳೆ ವಾಹನಗಳ ಪಾರ್ಕಿಂಗ್ಗೆ ಅಗತ್ಯ ವ್ಯವಸ್ಥೆ, ತಿಂಡಿ-ತಿನಿಸುಗಳಿಗಾಗಿ ಒಂದೇ ಸ್ಥಳದಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.
ಶಾಸಕರಾದ ಯು.ಟಿ. ಖಾದರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಉಲ್ಲಾಳ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಉಪಾದ್ಯಕ್ಷರಾದ ಮಹೀನ್ ಇಸ್ಮಾಯಿಲ್, ಉಸ್ತಾದ್ ಅಬ್ದುಲ್, ಜಂಟಿ ಕಾರ್ಯದರ್ಶಿಗಳಾದ ಆಸನ್ ಅಬ್ದುಲ್, ಯು.ಟಿ. ಇಲಿಯಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.