ಕಾರ್ಕಳ, ಅ 13 (DaijiworldNews/MS):ಸಾಣೂರು ಸಿದ್ದಿವಿನಾಯಕ ಪೆಟ್ರೋಲ್ ಬಂಕ್ ನ ಬೀಗ ಮುರಿದು ಅ.೬ ರಂದು ಕಳ್ಳತನ ಮಾಡಿದ್ದ ಮೂಡುಬಿದರೆ ಬೆಳುವಾಯಿಯ ಮುಡಾಯಿಕಾಡು ಸಂತೋಷ್ ಶೆಟ್ಟಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸಾಣೂರು ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಿದಾಗ ಜು.26 ರಂದು ಕಾರ್ಕಳ ಅನಂತಶಯನದಲ್ಲಿರುವ ಸ್ಟೇಟ್ ಬ್ಯಾಂಕ್ ಎಟಿಎಂ ಒಡೆದು ಕಳವಿಗೆ ಪ್ರಯತ್ನಿಸಿದ್ದು, ಅದೇ ದಿನ ಸಾಣೂರು ಸಿದ್ದಿವಿನಾಯಕ ಪೆಟ್ರೋಲ್ ಬಂಕ್ ನ ಬೀಗ ಮುರಿದು ಕಳ್ಳತನ ಮಾಡಿದ್ದಾಗಿ ಹಾಗೂ ಕೊಡ್ಯಡ್ಕ ಪೆಟ್ರೋಲ್ ಬಂಕ್ ನ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದನ್ನು ಪೊಲೀಸರ ಮುಂದೆ ಹೇಳಿದ್ದಾನೆ.
ಈತ ಮಂಗಳೂರು, ಮೂಡುಬಿದಿರೆ ಕಾರ್ಕಳ ಮಾರ್ಗದಲ್ಲಿ ಬಸ್ಸು ಚಾಲಕನಾಗಿದ್ದ. ಮಂಗಳೂರು ಉರ್ವ ಠಾಣೆಯಲ್ಲೂ ಕೊಲೆ ಪ್ರಕರಣ, ಬೈಕ್ ಕಳ್ಳತನ ಹಾಗೂ ಮನೆಗೆ ಬೆಂಕಿ ಹಾಕಿದ ಪ್ರಕರಣಗಳಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.