ಮಂಗಳೂರು, ಅ 12 (DaijiworldNews/MS): ಸ್ಮಾರ್ಟ್ ಸಿಟಿ ಯೋಜನೆಯಡಿ ಸರಕಾರಿ ಶಾಲೆಗಳನ್ನು ಸ್ಮಾರ್ಟ್ ಸ್ಕೂಲ್ ಆಗಿ ಪರಿವರ್ತಿಸಿ ಹೊಸ ರೂಪ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಮಾಡಲಾಗಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಬೋಳಾರ ವಾರ್ಡಿನ ದಕ್ಷಿಣ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯನ್ನು ಆಧುನಿಕರಣಗೊಳಿಸಿ ಸ್ಮಾರ್ಟ್ ಸ್ಕೂಲ್ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಬದಲಾಯಿಸುವ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಶಾಲೆಗಳನ್ನು ಆಧುನಿಕರಣಗೊಳಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಬೋಳಾರ ಶಾಲೆಯನ್ನು ಸಂಪೂರ್ಣವಾಗಿ ಆಧುನಿಕರಣಗೊಳಿಸಲಾಗಿದೆ ಎಂದರು.
1.25 ಕೋಟಿ ಅನುದಾನದಲ್ಲಿ ಪ್ರಮುಖವಾಗಿ ಹಂಚು, ಪಕ್ಕಾಸು, ಬದಲಾಯಿಸಲಾಗಿದೆ,ಇಡೀ ಶಾಲೆಗೆ ಟೈಲ್ಸ್ ಅಳವಡಿಸಲಾಗಿದೆ. ಹೊರಾಂಗಣದಲ್ಲಿ ಟೈಲ್ಸ್, ಗೋಡೆಗಳಿಗೆ ಪ್ಲಾಸ್ಟರಿಂಗ್, ಸಂಪೂರ್ಣ ಶಾಲೆಗೆ ಬಣ್ಣ ಬಳಿದು ಸುಂದರಗೊಳಿಸಲಾಗಿದೆ. ಬಾಗಿಲು ಕಿಟಿಕಿ, ಆರ್.ಸಿ.ಸಿ ಕಟ್ಟಡಗಳ ಮೇಲೆ ವಾಟರ್ ಪ್ರೂಫಿಂಗ್ ಮಾಡಲಾಗಿದೆ. ಶೌಚಾಲಯಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಶಾಲಾ ವಾರ್ಷಿಕೋತ್ಸವ ಹಾಗೂ ಇತರೆ ಕಾರ್ಯಕ್ರಮಗಳಿಗಾಗಿ ವೇದಿಕೆ, ವಿದ್ಯುತ್ ತಂತಿ, ನೀರಿನ ಕೊಳವೆ, ಪ್ಯಾನ್ ಹಾಗೂ ಟ್ಯೂಬ್ ಲೈಟ್ ಗಳನ್ನು ಸಂಪೂರ್ಣವಾಗಿ ಬದಲಿಸಿದ್ದೇವೆ. ಶಾಲೆಯ ಆವರಣದಲ್ಲಿ ಹುಲ್ಲು ಹಾಸು, ಹೂವಿನ ಗಿಡಗಳನ್ನು ನೆಡಲಾಗಿದೆ. ವಾಲಿಬಾಲ್ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಲಾಗಿದೆ. ಹೊರಾಂಗಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಹಾಗೂ ಮಳೆ ನೀರು ಚರಂಡಿಗಳನ್ನು ಕೂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲ ರಾವ್, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಸ್ಥಳೀಯ ಕಾರ್ಪೋರೇಟರ್ ರೇವತಿ ಶ್ಯಾಮ್ ಸುಂದರ್, ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು