ಕೋಟ, ಅ 11 (DaijiworldNews/MS): ಹಳ್ಳಿಗಳಲ್ಲಿ ಸಾಕಷ್ಟು ಪ್ರತಿಭೆಗಳು ಇರುತ್ತದೆ ಅದನ್ನು ಹೊರಗೆಳೆಯಲು ನಾವುಗಳು ಪ್ರಯತ್ನಿಸಬೇಕು ಇದಕ್ಕೆ ಕಾರಂತರಂತವರು ಪ್ರೇರಣೆಯಾಗುತ್ತದೆ ಎಂದು ತೂಗುಸೇತುವೆ ಹರಿಕಾರ ಗಿರೀಶ್ ಭಾರಧ್ವಜ್ ಹೇಳಿದ್ದಾರೆ.
ಕೋಟತಟ್ಟು ಗ್ರಾಮಪಂಚಾಯತ್ ,ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ,ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ರ ಸಂಭ್ರಮ ನಿರೂಪಿತ 2021ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಹಳ್ಳಿಗಳಲ್ಲಿ ಸಿಗುವ ಪ್ರೀತಿ ಮತ್ತೆ ಬೇರೆ ಭಾಗಗಳಲ್ಲಿ ಸಿಗಲು ಸಾಧ್ಯವಿಲ್ಲ ಅವುಗಳನ್ನು ನಾನು ನನ್ನ ಜೀವನದಲ್ಲಿ ಕಂಡಿದ್ದೇನೆ.ಕಾರಂತರ ಪ್ರತಿ ಕಾದಂಬರಿಯಲ್ಲಿ ಅರ್ಥಪೂರ್ಣ ಜೀವನದ ಕಲೆಗಳಿವೆ,ಕಾರಂತರ ಅನುಭವಗಳನ್ನು ತಮ್ಮ ಜೀವನದ ಕರ್ತವ್ಯದಲ್ಲಿ ಅಳವಡಿಸಿಕೊಂಡಿದ್ದಾರೆ ಈ ಎಲ್ಲಾ ಸಾಧನೆಗೆಳಿಗೆ ನನ್ನ ತಂದೆ ತಾಯಿ ಗುರುಗಳು ಮತ್ತು ಸಹದ್ಯೋಗಿಗಳು ಕಾರಣ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿ ಕಾರಂತರು ಶ್ರೇಷ್ಠ ಲೇಖಕರಾಗಿ, ಬಂಡಾಯ ಕವಿಯಾಗಿ, ಕಲಾವಿದನಾಗಿ,ಪರಿಸರವಾದಿಯಾಗಿ ಹೀಗೆ ಎಲ್ಲ ಕ್ಷೇತ್ರದಲ್ಲಿ ಕೈಯಾಡಿಸಿದವರು ಅಂತಹ ಮಹಾನ್ ಚೇತನ ಹೆಸರನ್ನು ಉಸಿರಿನ ಕಣ ಕಣದಲ್ಲೂ ಚಿರಸ್ಥಾಯಿಯಾಗಿಸಲು ಪಣತೋಟ್ಟಿದ್ದು ,ಕುವೆಂಪು ಮಾದರಿಯಲ್ಲಿ ಡಾ.ಶಿವರಾಮ ಕಾರಂತರ ಸಮಾಧಿ ನಿರ್ಮಾಣವಾಗಲಿದೆ, ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಿಂದ ಕಾರಂತ ಥೀಂ ಪಾರ್ಕ್ಗೆ ಬರುವ ರಸ್ತೆಯ ಅಗಲೀಕರಣ ಮತ್ತು ಥೀಂ ಪಾರ್ಕ್ನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ಪಾರಂಪಳ್ಳಿ ,ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್ ಶೆಣೈ,ಯುವ ಗಾಯಕ ಸುರೇಶ್ ಕಾರ್ಕಡ, ಹಾಡು ರಚನೆಗಾರ ಹರೀಶ್ ವಡ್ಡರ್ಸೆ ಇವರುಗಳನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ ಇದರ ಅಧಿಕಾರಿ ಕುಮಾರ್ ಬೆಕ್ಕೇರಿ,ಬ್ರಹ್ಮಾವರ ತಾ.ಪಂ ಇ.ಒ ಎಚ್ ,ಆರ್ ಇಬ್ರಾಹಿಂಪುರ,ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಥೀಂ ಪಾಕ್9 ನಿರ್ವಾಹಕಿ ಪೂರ್ಣಿಮಾ, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ , ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಮತ್ತಿತರರು ಉಪಸ್ಥಿತರಿದ್ದರು.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಸ್ವಾಗತಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವನೆ ಸಲ್ಲಿಸಿದರು. ಆಶಯ ಗೀತೆಯನ್ನು ಪ್ರತಿಷ್ಠಾನದ ಟ್ರಸ್ಟಿ ರವಿ ಕಾರಂತ್ ಹಾಡಿದರು. ಪ್ರಶಸ್ತಿ ಪುರಸ್ಕ್ರತರ ಬಗ್ಗೆ ಆಯ್ಕೆ ಸಮಿತಿ ಸಂಚಾಲಕ ಯು.ಎಸ್ ಶೆಣೈ ಸವಿವರವಾಗಿ ವಿವರಿಸಿದರು.ಸಾಲಿಗ್ರಾಮ ಮಕ್ಕಳ ಮೇಳದ ಮುಖ್ಯಸ್ಥ ಎಚ್ ಶ್ರೀಧರ ಹಂದೆ ಯಕ್ಷಗಾನ ಶೈಲಿಯಲ್ಲಿ ಪ್ರಶಸ್ತಿ ಪುರಸ್ಕ್ರತರ ಗುಣಗಾನಗೈದರು.ಕಾರ್ಯಕ್ರಮವನ್ನು ಪ್ರತಿಷ್ಠಾನದ ಟ್ರಸ್ಟಿ ಸತೀಶ್ ವಡ್ಡರ್ಸೆ ನಿರೂಪಿಸಿದರು. ಕೋಟತಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲ ಎಸ್ ಪೂಜಾರಿ ವಂದಿಸಿದರು.ಕಾರ್ಯಕ್ರಮಕ್ಕಿಂತ ಮೊದಲು ಕೋಟತಟ್ಟು ಗ್ರಾಮಪಂಚಾಯತ್ನಿಂದ ಅದ್ಧೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.ಈ ಸಂದರ್ಭದಲ್ಲಿ ಕಾರಂತರ ಕಂಚಿನ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕ್ರತ ತೂಗುಸೇತುವೆ ಹರಿಕಾರ ಗಿರೀಶ್ ಭಾರಧ್ವಜ್ ಇವರ ಭಾವಚಿತ್ರವನ್ನು ಕೋಟತಟ್ಟಿನ ಸ್ಥಳೀಯ ಚಿತ್ರಕಲಾವಿದ ಶಿವಪ್ರಸನ್ನ ಭಂಡಾರಿ ಶ್ರೀಯುತರಿಗೆ ನೀಡಿ ಅನಾವರಣ ಮಾಡಿದರು.