ಕೋಟ, ಅ. 10 (DaijiworldNews/SM): ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಾಡಿ-ಹರ್ಕಾಡಿಯಲ್ಲಿ ಹಿಂದೂಗಳನ್ನು ಅನ್ಯಕೋಮಿಗೆ ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೋಟ ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆಗೆ ಯತ್ನಿಸಿದ ಘಟನೆ ಇಂದು ರಾತ್ರಿ ಸಂಭವಿಸಿದೆ.
ಇಲ್ಲಿನ ಹಳ್ಳಾಡಿ ಸಮೀಪ ಹಿಂದೂ ಧರ್ಮದಿಂದ ಅನ್ಯಕೋಮಿಗೆ ಮತಾಂತರವಾದ ಕುಟುಂಬವೊಂದು ಸ್ಥಳೀಯ ಭೋವಿ ಸಮಾಜದವರನ್ನು ಗುರಿಯಾಗಿಸಿಕೊಂಡು ಆಮಿಷ ತೋರಿಸಿ ಹಲವಾರು ಮಂದಿಯನ್ನು ಮತಾಂತರಗೊಳಿಸಿದೆ ಎನ್ನಲಾಗಿದ್ದು, ರವಿವಾರ ಕೂಡ ಇದೇ ರೀತಿ ಹಳ್ಳಾಡಿ-ಹರ್ಕಾಡಿಯ ಮನೆಯೊಂದಕ್ಕೆ ಹಲವರನ್ನು ಪ್ರಾರ್ಥನೆಗೆ ಆಹ್ವಾನಿಸಿದ್ದು, ವಿಷಯ ತಿಳಿದ ಜಾಗರಣ ವೇದಿಕೆ ಸದಸ್ಯರು ತತ್ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೇಳು ಮಂದಿಯನ್ನು ವಶಕ್ಕೆ ಪಡೆದರು.
ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಠಾಣೆಯ ಆವರಣಕ್ಕೆ ಆಗಮಿಸಿ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ.ಯವರು ಜಾಗರಣ ವೇದಿಕೆ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಅನಂತರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜ್ಯೋತಿ, ಪ್ರಕಾಶ್, ಮನೋಹರ್, ರವಿ ಎನ್ನುವವರ ವಿರುದ್ಧ ಸ್ಥಳೀಯರು ದೂರು ದಾಖಲಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಭೋವಿ ಸಮಾಜದ ಉಡುಪಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಜಗದೀಶ್ ಕೆದೂರು ಮಾತನಾಡಿ, ಸಾಬ್ರಕಟ್ಟೆ, ಶಿರಿಯಾರ, ಹಳ್ಳಾಡಿ-ಹರ್ಕಾಡಿ ,ಕೆದೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಸಾವಿರಾರು ಮಂದಿ ನಮ್ಮ ಸಮಾಜದ ಬಡವರನ್ನು ಈಗಾಗಲೇ ಆಸೆ-ಆಮಿಷ ತೋರಿಸಿ ಮತಾಂತರಗೊಳಿಸಲಾಗಿದೆ. ಇದೇ ರೀತಿ ಮುಂದುವರಿದರೆ ನಾವೆಲ್ಲ ಹಿಂದೂ ಧರ್ಮದಿಂದ ದೂರವಾಗುವ ಅಪಾಯವಿದೆ. ಈ ಕುರಿತು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದರು.