ಬಂಟ್ವಾಳ, ಅ.10 (DaijiworlNews/HR): ನಗರ ಠಾಣೆಯಲ್ಲಿ ಶನಿವಾರ ದಾಖಲಾದ ಅಪ್ರಾಪ್ತ ಬಾಲಕಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣ, ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ರೋಚಕ ತಿರುವು ಪಡೆದುಕೊಂಡಿದೆ. ಅಮ್ಟಾಡಿಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವುದು ಮಂಗಳೂರಿನ ಖಾಸಗಿ ಲಾಡ್ಜ್ ನಲ್ಲಿ ಎನ್ನುವುದು ಧೃಡಪಟ್ಟಿದೆ.
ಬಂಟ್ವಾಳ ನಗರ ಠಾಣೆ
ಈ ಹಿನ್ನೆಲೆಯಲ್ಲಿ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ ಕಾಪು ನಿವಾಸಿ ಕೆ. ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ ಇದಾಯತ್ತುಲ್ಲ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಅಪ್ರಾಪ್ತ ವಯಸ್ಸಿನ ಸಂತಸ್ತ ಬಾಲಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಕೆಯ ಪರಿಚಿತ ಎನ್ನಲಾದ ಉಡುಪಿ ಕಾಪು ನಿವಾಸಿ ಕೆ.ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ ಉತ್ತರ ಕನ್ನಡ ಮೂಲದ ಇದಾಯತ್ತುಲ್ಲ ರವರುಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ಇಡೀ ಪ್ರಕರಣ ಹೊಸತಿರುವು ಪಡೆದುಕೊಂಡಿದೆ.
ಕೆ.ಎಸ್ ಶರತ್ ಶೆಟ್ಟಿ ಎಂಬ ಆರೋಪಿ ನೊಂದ ಬಾಲಕಿ ಯೊಂದಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿ ಮೊಬೈಲ್ ನಲ್ಲಿ ಸಂಪರ್ಕದಲ್ಲಿದ್ದು, ನೊಂದ ಬಾಲಕಿಯನ್ನು ಆರೋಪಿ ಶರತ್ ಶೆಟ್ಟಿ ತನ್ನ ಸಂಬಂಧಿ ಮಾರುತಿ ಮಂಜುನಾಥ್ ಗೆ ಪರಿಚಯ ಮಾಡಿಸಿದ್ದು ಆರೋಪಿ ಮಂಜುನಾಥ್ ನೊಂದ ಬಾಲಕಿ ಯೊಂದಿಗೆ ಸಲುಗೆಯಿಂದ ಇದ್ದು ವಾಟ್ಸ್ಆಪ್ ನಲ್ಲಿ ಅಶ್ಲೀಲ ವಿಡಿಯೋ ಚಾಟ್ ಮಾಡಿಕೊಂಡಿದ್ದ. ಇಂದು ಆರೋಪಿ ಶರತ್ ಶೆಟ್ಟಿ ಬಾಲಕಿಗೆ ಮಂಗಳೂರಿಗೆ ಬರುವಂತೆ ತಿಳಿಸಿದಂತೆ ನೊಂದ ಬಾಲಕಿ ಬಸ್ ನಲ್ಲಿ ಮಂಗಳೂರಿಗೆ ತೆರಳಿ ಸಿಟಿ ಮಹಲ್ ಬಳಿ ಆರೋಪಿಯಾದ ಶರತ್ ಶೆಟ್ಟಿ ಯನ್ನು ಭೇಟಿಯಾಗಿದ್ದು, ಬಾಲಕಿಯನ್ನು ಲಾಡ್ಜ್ ನಲ್ಲಿ ವಿಶ್ರಾಂತಿ ಮಾಡೋಣ ಎಂದು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ಒಂದಕ್ಕೆ ಕರೆದು ಕೊಂಡು ಹೋಗಿ ನೊಂದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ನಂತರ ತನ್ನ ಸ್ನೇಹಿತ ಇದಾಯತ್ತುಲ್ಲ ನಿಗೆ ಒಂದು ಹುಡುಗಿ ಇದೆ ಲಾಡ್ಜ್ ಗೆ ಬರುವಂತೆ ತಿಳಿಸಿದ್ದು ಆರೋಪಿ ಇದಾಯತ್ತುಲ್ಲೂ ಲಾಡ್ಜ್ ಗೆ ತೆರಳಿ ನೊಂದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ತನಿಖೆ ಸಂದರ್ಭ ತಿಳಿದುಬಂದಿದೆ.
ಆರೋಪಿ ಲಾಡ್ಜ್ ಸತೀಶ್ ಆರೋಪಿಗಳು ಅತ್ಯಾಚಾರ ಎಸಗಲು ಲಾಡ್ಜ್ ನಲ್ಲಿ ಅವಕಾಶ ಮಾಡಿಕೊಟ್ಟಿದ್ದಲ್ಲದೇ, ನೊಂದ ಬಾಲಕಿ ತಂಗಿದ್ದ ರೂಂಗೆ ತೆರಳಿ ನೊಂದ ಬಾಲಕಿಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಶೋಷಣೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಕೃತ್ಯ ನಡೆದ ಬಳಿಕ ನೊಂದ ಬಾಲಕಿ ಬಸ್ ಮೂಲಕ ಬಂಟ್ವಾಳಕ್ಕೆ ಬಂದಿರುವ ಬಗ್ಗೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಆರಂಭದಲ್ಲಿ ಕಾರಿನಲ್ಲಿ ಅಪಹರಿಸಿ, ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಲಾಗಿದ್ದು, ಬಂಟ್ವಾಳ ಪೊಲೀಸರ ಮಿಂಚಿನ ಕಾರ್ಯಾಚರಣೆ, ತನಿಖೆಯಿಂದ ಪ್ರಕರಣದ ನಿಜಾಂಶ ಬಯಲಾಗಿದೆ. ಸಂತ್ರಸ್ತ ಬಾಲಕಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಘಟನೆಯ ಹಿಂದಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮಾರ್ಗದರ್ಶನದಲ್ಲಿ, ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿಡಿ ನಾಗರಾಜ್, ಉಪನಿರೀಕ್ಷಕರಾದ ಅವಿನಾಶ್, ಪ್ರಸನ್ನ ಮತ್ತವರ ತಂಡ ಭಾಗವಹಿಸಿದೆ.
ಕಾಪು ನಿವಾಸಿ ಕೆ. ಎಸ್ ಶರತ್ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಬಾಲಕಿಯನ್ನು ಪರಿಚಯಿಸಿಕೊಂಡಿದ್ದು, ಔಷಧಿ ನೀಡುವ ನೆಪದಲ್ಲಿ ಸಲುಗೆ ಬೆಳೆಸಿಕೊಂಡಿದ್ದ, ಮಾರುತಿ ಮಂಜುನಾಥ್ ಸಂತ್ರಸ್ತ ಬಾಲಕಿಜೊತೆ ಅಶ್ಲೀಲ ಚಾಟ್ ಮಾಡಿಕೊಂಡಿದ್ದು ಬಾಲಕಿಯ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದುದು ತನಿಖೆಯಲ್ಲಿ ಧೃಡಪಟ್ಟಿದೆ.