ಉಡುಪಿ, ಅ.09 (DaijiworldNews/HR): ಆರ್ಎಸ್ಎಸ್ ಬಗ್ಗೆ ಕುಮಾರಸ್ವಾಮಿ ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ. ಆದರೆ ಒಂದು ವರ್ಗದ ಓಟ್ ಬ್ಯಾಂಕಿಗೆ ಅವರು ಜೊಲ್ಲು ಸುರಿಸುತ್ತಿದ್ದಾರೆ. ಆರೆಸ್ಸೆಸ್ ಏನು ಮಾಡಿದೆ ಹೇಳಿ? ನಾನು ಆರೆಸ್ಸೆಸ್, ರಾಷ್ಟ್ರಪತಿ ಉಪರಾಷ್ಟ್ರಪತಿ ಆರ್ಎಸ್ಎಸ್, ಪ್ರಧಾನಿ ಮೋದಿ ಆರ್ಎಸ್ಎಸ್ನಿಂದ ಬಂದವರು ನಾವು ನಿಮಗೆ ಏನು ತೊಂದರೆ ಮಾಡಿದ್ದೇವೆ ಹೇಳಿ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಹೇಳಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ದೇಶಭಕ್ತಿ ಹೇಳಿಕೊಡುವ ದೊಡ್ಡ ಸಂಘಟನೆ. ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ. ಮತ ಕಿತ್ತುಕೊಳ್ಳಲು ಕುಮಾರಸ್ವಾಮಿ ಸಿದ್ದರಾಮಯ್ಯ ಕಾಂಪಿಟೇಷನ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಆರ್ಎಸ್ಎಸ್ ಬಗ್ಗೆ ಪ್ರೆಸ್ಮೀಟ್ ಮಾಡಲಿ ಎಲ್ಲವೂ ಚರ್ಚೆಯಾಗಲಿ ನೋಡೋಣ" ಎಂದರು.
ದ.ಕ ಜಿಲ್ಲೆಯ ಬಂಟ್ವಾಳ ಗ್ಯಾಂಗ್ ರೇಪ್ ಪ್ರಕರಣದ ಕುರಿತು ಮಾತನಾಡಿದ ಅವರು, "16 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಕೇಸು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರ ತನಿಖೆ ವೇಗವಾಗಿ ಹೋಗುತ್ತಿದೆ. ಬಿಗಿಯಾದ ಕಾನೂನು ಕ್ರಮ ತೆಗೆದುಕೊಂಡು ಅತ್ಯಾಚಾರ ಪ್ರಕರಣವನ್ನು ಸಹಿಸೋದಿಲ್ಲ" ಎಂದಿದ್ದಾರೆ.
ಕರಾವಳಿಯಲ್ಲಿ ಹೆಚ್ಚುತ್ತಿರುವ ಗೋ ಹತ್ಯಾ ಪ್ರಕರಣದ ಕುರಿತು ಪ್ರತಿಕ್ರಿಸಿದ ಅವರು, "ಗೋಹತ್ಯಾ ನಿಷೇಧ ಕಾಯ್ದೆಯ ಜಾರಿಯಲ್ಲಿ ಇದ್ದು, ಈ ಕಾಯ್ದೆ ವಿಫಲ ಆಗಿಲ್ಲ. ಗೋಹತ್ಯಾ ನಿಷೇಧ ಕಾಯ್ದೆ ವಿಫಲವಾಗಲು ಪೊಲೀಸರು ಬಿಡಬಾರದು. ಗೋಹತ್ಯೆ ಹೆಚ್ಚುತ್ತಿರುವುದರಿಂದ ಸಾಮಾಜಿಕ ಅಶಾಂತಿಗೂ ಕಾರಣವಾಗಿದೆ. ಅಕ್ರಮ ಗೋಸಾಗಾಟ ಗೋಹತ್ಯೆ ಶೇಕಡ 100 ನಿಲ್ಲಿಸಬೇಕು" ಎಂದು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಜ್ಞಾತ ಸ್ಥಳಗಳಿಂದ ಸ್ಯಾಟಲೈಟ್ ಕರೆ ವಿಚಾರವಾಗಿ ಮಾತನಾಡಿದ ಅವರು, "ಎಷ್ಟು ಕರೆಗಳು ಹೋಗಿದೆ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ಕೇಂದ್ರ ಸರಕಾರದ ಟೀಮ್ ನಮ್ಮ ಪೊಲೀಸರ ಜೊತೆ ಸಂಪರ್ಕದಲ್ಲಿದೆ. ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆ.ಈ ಬಗ್ಗೆ ಹೆಚ್ಚೇನೂ ಮಾತನಾಡಲು ಸಾಧ್ಯವಿಲ್ಲ. ಯಾವುದೇ ಅರಣ್ಯ ಪ್ರದೇಶದಿಂದ ಕರೆ ಹೋಗಿರಲಿ ಅದನ್ನು ಪತ್ತೆಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದರು.
ಮತಾಂತರ ಕುರಿತು ಪ್ರತಿಕ್ರಿಯಿಸಿದ ಅವರು, ಮತಾಂತರ ಮಾಡಲು ನಾವು ಬಿಡುವುದಿಲ್ಲ. ವಿಧಾನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಒಬ್ಬ ಶಾಸಕರು ತನ್ನ ತಾಯಿಯನ್ನೇ ಮತಾಂತರ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನೂರ ಹತ್ತಿರಾನೂ ಹೀಗೆ ಆಗಿದ್ದು, ಹೆಂಡತಿ ಹೇಳ್ತಾಳೆ ತುಳಸಿಕಟ್ಟೆ ಕಿತ್ತು ಹಾಕು ಅಂತ. ಗಂಡ ಹೇಳುತ್ತಾನೆ ತುಳಸಿಕಟ್ಟೆ ಇರಲಿ ಅಂತ. ಮನೆಯಲ್ಲಿ ಪ್ರತಿದಿನ ಜಗಳ. ಒಂದೇ ಮನೆಯೊಳಗೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದ್ದು, ಎಲ್ಲರೂ ಅವರವರ ಧರ್ಮದಲ್ಲಿ ಚೆನ್ನಾಗಿರಲಿ ನೆಮ್ಮದಿಯಲ್ಲಿ ಇರಲಿ. ಇನ್ನೊಬ್ಬರ ಧರ್ಮ ಬದಲಾವಣೆ ಮಾಡುವ ವ್ಯವಸ್ಥಿತ ಜಾಲ ಇದ್ದು, ಈ ಜಾಲವನ್ನು ನಾವು ಮಟ್ಟ ಹಾಕುತ್ತೇವೆ" ಎಂದಿದ್ದಾರೆ.
ಇನ್ನು ಬಾಂಗ್ಲಾ ವಲಸಿಗರ ಬಗ್ಗೆ ಮಾತನಾಡಿದ ಅವರು, "ಕರ್ನಾಟಕ ರಾಜ್ಯ, ಭಾರತ ದೇಶ ಯಾರಿಗೂ ಧರ್ಮಛತ್ರವಲ್ಲ. ಯಾರು ಬೇಕಾದರೂ ಬಂದು ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ. ಬಾಂಗ್ಲಾದೇಶಿಯರನ್ನು ದೇಶದೊಳಗೆ ನುಗ್ಗಿಸುವಂತ ಕೆಲಸ ಆಗುತ್ತಿದ್ದು, ಅಕ್ರಮ ವಲಸಿಗರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೊಡಿಸಲಾಗುತ್ತದೆ. ಇದರ ಹಿಂದೆ ದೊಡ್ಡಜಾಲ ಕಾರ್ಯನಿರ್ವಹಿಸುತ್ತಿದೆ. ಸದ್ಯದಲ್ಲೇ ಅವರನ್ನು ನಾವು ಮುಗಿಸುತ್ತೇವೆ. ಈ ಬಗ್ಗೆ ಅಧಿಕಾರಿಗಳಿಗೆ ನಾನು ಹೇಳಿದ್ದೇನೆ" ಎಂದು ತಿಳಿಸಿದ್ದಾರೆ.