ಬಂಟ್ವಾಳ, ಅ.09 (DaijiworldNews/PY): ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು - ಅಡ್ಡಹೊಳೆ ಚತುಷ್ಪಥ (63 ಕಿ.ಮೀ.) ಕಾಮಗಾರಿ ಬಿರುಸಿನಿಂದ ಆರಂಭಗೊಂಡಿದ್ದು, ಕಲ್ಲಡ್ಕ ಪೇಟೆಯ ಇಕ್ಕೆಲಗಳ ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿದೆ.
ಕಲ್ಲಡ್ಕದಲ್ಲಿ 6 ಲೇನ್ ಫ್ಲೈ ಓವರ್ ನಿರ್ಮಾಣಕ್ಕೆ ಪೂರ್ವಭಾವಿ ಕಾಮಗಾರಿ (ಪ್ರಿ ಕನ್ಸ್ಟ್ರಕ್ಷನ್ಸ್ ಆ್ಯಕ್ಟಿವಿಟಿ) ಆರಂಭಗೊಂಡಿದ್ದು, ಕಟ್ಟಡಗಳ ತೆರವು ಕಾರ್ಯ ಕಲ್ಲಡ್ಕದ ಚಿತ್ರಣವನ್ನೇ ಬದಲಿಸುತ್ತಿದೆ.
ಕೆ.ಟಿ. ಹೋಟೆಲ್ ಇನ್ನೆರಡೇ ದಿನ:
65 ವರ್ಷಗಳ ಇತಿಹಾಸವುಳ್ಳ ಹೆಸರಾಂತ ಕಲ್ಲಡ್ಕ ಕೆ.ಟಿಯ ಹೋಟೆಲ್ ಲಕ್ಷ್ಮೀ ನಿವಾಸದ ಕಟ್ಟಡವೂ ರಸ್ತೆ ಅಗಲೀಕರಣದ ಕಾರಣಕ್ಕೆನೆಲಸಮವಾಗಲಿದ್ದು, ಅ.10 ಕ್ಕೆ ಇದು ಕಾರ್ಯಸ್ಥಗಿತಗೊಳಿಸಲಿದೆ. ಹಳೆ ಕೆ.ಟಿ ಹೋಟೇಲಿನ ಕೆ.ಟಿ ಚಹಾದ ರುಚಿ ಸವಿಯ ಬೇಕೆಂದರೆ ತಕ್ಷಣವೇ ಭೇಟಿನೀಡಬೇಕಾಗಿದೆ. ಮುಂದಿನ ನವೆಂಬರ್ ಅಂತ್ಯದ ಒಳಗಾಗಿ ಈಗಿನ ಕೆ.ಟಿ ಹೋಟೆಲ್ ಕಟ್ಟಡದ ಹಿಂಭಾಗದಲ್ಲಿ ಸುಸಜ್ಜಿತ ಹೋಟೆಲ್ ಅನ್ನು ನಿರ್ಮಿಸುವುದಾಗಿ ಮಾಲಕ ಶಿವರಾಮ ಹೊಳ್ಳ ತಿಳಿಸಿದ್ದಾರೆ.
ಕಾಮಗಾರಿಗೆ ಭರದ ತಯಾರಿ: ಬಿ.ಸಿ.ರೋಡಿನಿಂದ ಪೆರಿಯಶಾಂತಿವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್ನ ಕೆಎನ್ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್ 1,100.88 ಕೋ.ರೂ.ಗಳಿಗೆ ವಹಿಸಿಕೊಂಡಿದೆ. ಕಲ್ಲಡ್ಕದಲ್ಲಿ ಮಾತ್ರ 6 ಲೇನ್ಗಳ ಫ್ಲೈ ಓವರ್ ಇರಲಿದೆ.
ಉದನೆಯಲ್ಲಿ ಯಂತ್ರಗಳ ಅಳವಡಿಕೆ: ಪೆರಿಯಶಾಂತಿಯಿಂದ ಅಡ್ಡಹೊಳೆವರೆಗಿನ 15 ಕಿ.ಮೀ. ಕಾಮಗಾರಿಯನ್ನು 317 ಕೋ.ರೂ.ಗಳಿಗೆ ಮಹಾರಾಷ್ಟ್ರದ ಶ್ರೀ ಎಸ್.ಎಂ. ಔತಾಡೆ ಪ್ರೈ ಲಿ. ಕಂಪೆನಿ ನಿರ್ವಹಿಸಲಿದೆ. ಈಗಾಗಲೇ ಶಿರಾಡಿಯ ಉದನೆಯಲ್ಲಿ ಯಂತ್ರಗಳ ಅನುಷ್ಠಾನ ಕಾರ್ಯ ಆರಂಭಿಸಿದೆ.
ಕಲ್ಲಡ್ಕದಲ್ಲಿ ಯಾವ ರೀತಿಯಲ್ಲಿ ಹೆದ್ದಾರಿ ಸಾಗಲಿದೆ ಎಂಬ ಕುರಿತು ಗೊಂದಲಗಳಿದ್ದು, ಪೇಟೆಯ ಮೂಲಕವೇ ಚತುಷ್ಪಥ ಸಾಗಲಿದೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಬೈಪಾಸ್ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ರಾ.ಹೆ. ಪ್ರಾಧಿಕಾರವು ಫ್ಲೈ ಓವರ್ ನಿರ್ಮಾಣವನ್ನೇ ಅಂತಿಮಗೊಳಿಸಿತ್ತು. ಕಟ್ಟಡ, ಮನೆಗಳ ತೆರವು ಕಾರ್ಯಾಚರಣೆಯ ಬಳಿಕ ಮೊದಲ ಹಂತದಲ್ಲಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆಯ ನಿರ್ಮಾಣ ನಡೆದು ಬಳಿಕ ಫ್ಲೈಓವರ್ ನಿರ್ಮಾಣ ಕಾರ್ಯನಡೆಯಲಿದೆ.
ಅಳಿಸಿ ಹೋದ ಮಾರ್ಕಿಂಗ್!
ಹಲವು ಸಮಯದ ಹಿಂದೆಯೇ ಕಲ್ಲಡ್ಕದ ಕೆ.ಸಿ.ರೋಡ್ನಿಂದ ಕುದ್ರೆಬೆಟ್ಟುವರೆಗೆ ಫ್ಲೈ ಓವರ್ ಮಾರ್ಕಿಂಗ್ ಮಾಡಲಾಗಿದ್ದು, ಆರಂಭ - ಅಂತ್ಯದಲ್ಲಿ ಫ್ಲೈ ಓವರ್ ಸ್ಟಾರ್ಟ್ಸ್- ಫ್ಲೈ ಓವರ್ ಎಂಡ್ಸ್ ಎಂದು ಬರೆಯಲಾಗಿತ್ತು. ಆದರೆ ಡಾಮರು ಕಾಮಗಾರಿ ವೇಳೆ ಅದು ಮುಚ್ಚಿ ಹೋಗಿದೆ.
ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣದ ಮುಂಚಿತವಾಗಿ ಭೂತಾಂತ್ರಿಕ ಪರಿಶೀಲನಾ ಕಾರ್ಯ ಆರಂಭಗೊಂಡಿದೆ. ಫ್ಲೈ ಓವರ್ ನಿರ್ಮಾಣದ ಪೂರ್ವಭಾವಿಯಾಗಿ ಪೂರ್ಲಿಪಾಡಿಯಿಂದ ಕೆ.ಸಿ.ರೋಡ್ ವರೆಗೆ ಭೂತಾಂತ್ರಿಕ ಪರಿಶೀಲನೆ (ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಶನ್) ಪೂರ್ಣಗೊಳ್ಳುವ ಹಂತದಲ್ಲಿದೆ. ಬೃಹತ್ ಪಿಲ್ಲರ್ಗಳ ನಿರ್ಮಾಣಕ್ಕಾಗಿ ಭೂಮಿಯ ಕಲ್ಲು, ಮಣ್ಣಿನ ಪರೀಕ್ಷಾ ಕಾರ್ಯವು ಯಂತ್ರೋಪಕರಣಗಳ ಮೂಲಕ ವೇಗವಾಗಿ ನಡೆಯುತ್ತಿದೆ.
ಪ್ರಸ್ತುತ ಕಾಮಗಾರಿಯ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡಿದೆ.
"ಕಟ್ಟಡಗಳ ತೆರವಿಗೆ ಅಕ್ಟೋಬರ್ 10ರ ಗಡುವನ್ನು ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. ಅದರಂತೆ 10 ನೇ ತಾರೀಖಿನಂದು ಹಳೆಯದಾದ ಲಕ್ಷ್ಮೀ ನಿವಾಸ ಕೆಟಿ ಹೋಟೆಲ್ ಕಾರ್ಯವನ್ನು ಸ್ಥಗಿತಗೊಳಿಸುತ್ತಿದ್ದೇವೆ. ನವೆಂಬರ್ ಗೆ ಹೊಸಕಟ್ಟಡ ಸಿದ್ಧಗೊಳ್ಳುತ್ತದೆ. ಪ್ರತಿಯೊಬ್ಬರೂ ಕಾಮಗಾರಿಗೆ ಸಹಕಾರ ನೀಡಿದರೆ ಕಾಮಗಾರಿ ಶೀಘ್ರನಡೆಸಲು ಅನುಕೂಲವಾಗುತ್ತದೆ."
-ಶಿವರಾಮ ಹೊಳ್ಳ, ಮಾಲಕರು, ಹೋಟೆಲ್ ಲಕ್ಷ್ಮೀ ನಿವಾಸ , ಕಲ್ಲಡ್ಕ
"ಸ್ವಾಧೀನ ಗೊಂಡ ಜಮೀನು, ಕಟ್ಟಡಗಳ ತೆರವು ಪ್ರಕ್ರಿಯೆ ಮುಗಿದ ತಕ್ಷಣವೇ 63 ಕಿ.ಮೀ. ಹೆದ್ದಾರಿಯ ಎಲ್ಲ ಕಾಮಗಾರಿಗಳು ಒಂದೇ ಸಮಯದಲ್ಲಿ ಆರಂಭಗೊಳ್ಳಲಿದೆ. ಅಕ್ಟೋಬರ್ 12 ರ ಬಳಿಕ ಕಾಮಗಾರಿ ವೇಗಪಡೆದುಕೊಳ್ಳಲಿದೆ."
-ಶಿಶುಮೋಹನ್, ಯೋಜನಾ ನಿರ್ದೇಶಕರು, ಎನ್ಎಚ್ಎಐ, ಮಂಗಳೂರು