ಮಂಗಳೂರು, ಅ. 08 (DaijiworldNews/SM): ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಸಂದರ್ಭದಲ್ಲಿ ನವೆಂಬರ್ 2 ರಿಂದ 5 ಮತ್ತು ನ.15 ರಿಂದ ನ.16 ರವರೆಗೆ ಒಟ್ಟು 6 ದಿನಗಳ ಕಾಲ ಮಂಗಳೂರು ಪೊಲ್ಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವ ಅರ್ಜಿದಾರರು ಐಇ-5 ರಲ್ಲಿ ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ ಐಇ-5, ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಲು ತಿಳಿಸಲಾಗಿದೆ.
ಸ್ಫೋಟಕ ಕಾಯ್ದೆ ಮತ್ತು ನಿಯಮ 2008ರ ಶೆಡ್ಯೂಲ್-4ರಡಿಯಲ್ಲಿ ಹಾಗೂ ಈ ಮೇಲಿನ ಆದೇಶದನ್ವಯ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮೈದಾನದಲ್ಲಿ ತೆರೆದ ಪ್ರದೇಶಗಳಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು, ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಈಗಾಗಲೇ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹದಾಗಿದೆ.
ಅರ್ಜಿ ಪಡೆಯಲು ಅ.16 ಕೊನೆಯ ದಿನ ಆಗಿರುತ್ತದೆ. ಅರ್ಜಿ ನಮೂನೆಯನ್ನು ಪೊಲೀಸ್ ಆಯುಕ್ತರ ಕಚೇರಿಯಿಂದಲೇ ಪಡೆದು 200 ರೂ.ಗಳನ್ನು ಪಾವತಿಸಿ ಪಡೆದುಕೊಳ್ಳುವುದು, ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಈ ಕಚೇರಿಯಲ್ಲಿ ಸ್ವೀಕರಿಸಲಾಗುವುದಿಲ್ಲ ಹಾಗೂ ಮೊತ್ತವನ್ನು ಮರು ಪಾವತಿಸಲಾಗುವುದಿಲ್ಲ.
ಅರ್ಜಿ ಸ್ವೀಕರಿಸಿದ ನಂತರ ಅರ್ಜಿದಾರರು ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ ಹಾಗೂ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ನೇರವಾಗಿ ಎನ್.ಓ.ಸಿ (ನಿರಾಕ್ಷೇಪಣಾ ಪತ್ರ) ಪಡೆಯಬೇಕಾಗಿರುತ್ತದೆ.
ಈ ರೀತಿ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಐಇ-5 ನಮೂನೆ, ಅಫೀಡಾವಿತ್ ಪ್ರಸ್ತಾವಿತ ಜಮೀನಿನ ದಾಖಲೆ ಹಾಗೂ ಪಹಣಿ ಪತ್ರ, 2 ಭಾವಚಿತ್ರ, ಸರಕಾರಿ ಜಮೀನು ಅಲ್ಲದೇ ಇದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ ಒಂದುವೇಳೆ ಸರಕಾರಿ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಗೆ ಸಂಬಂಧಪಟ್ಟಿದೆಯೋ ಆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರದೊಂದಿಗೆ ಈ ಕಚೇರಿಗೆ ಅ.26ರೊಳಗಾಗಿ ಸಲ್ಲಿಸಬೇಕು.
ಮಂಜೂರಾದ ಪರವಾನಿಗೆಯನ್ನು ಅರ್ಜಿದಾರರು ಅ. 30 ರಂದು ನಿಗದಿತ ಶುಲ್ಕ(ರೂ.500) ಪಾವತಿಸಿ ನಮೂನೆ ಐಇ-5ರಲ್ಲಿ ಪರವಾನಿಗೆಯನ್ನು ಪಡೆಯತಕ್ಕದ್ದು. ತಾತ್ಕಾಲಿಕ ಮಳಿಗೆಗಳನ್ನು ತೆರೆಯುವ ಸಂದರ್ಭದಲ್ಲಿ ಸದರಿ ಮೂಲ ಪರವಾನಿಗೆಯನ್ನು ಕಡ್ಡಾಯವಾಗಿ ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಇರಿಸುವುದು, ಪರವಾನಿಗೆಯಲ್ಲಿರುವವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.
ಈ ಕಚೇರಿಯಿಂದ ಪರವಾನಿಗೆಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ಪಟಾಕಿ ಮಾರಾಟದ ಮಳಿಗೆಗಳನ್ನು ನ.2 ರಿಂದ ನ.5 ಮತ್ತು ನ.15 ರಿಂದ ನ.16ರವರೆಗೆ ಒಟ್ಟು 6 ದಿನಗಳು ಮಾತ್ರ ತೆರೆದಿರಬೇಕು. ಪರವಾನಿಗೆಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ/ ಪ್ರಾಧಿಕಾರಗಳು ಅನುಮತಿಸಬೇಕು.
ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ ಕನಿಷ್ಠ 6 ಮೀಟರ್ ದೂರವಿರಬೇಕು. ಪಟಾಕಿ ಸುಡುಮದ್ದುಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಜೇಷನ್ ಮಾಡುವುದು ಹಾಗೂ ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಜರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮಾರುವ ವ್ಯಾಪಾರಸ್ಥರು ಮತ್ತು ಖರೀದಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಪಟಾಕಿ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವುದು. ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆದೇಶ / ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿ ಶಿಸ್ತು ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.