ಕುಂದಾಪುರ, ಅ 08 (DaijiworldNews/MS): ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಅವಶ್ಯಕತೆಯನ್ನು ಒದಗಿಸುವಲ್ಲಿ ಇನ್ನೂ ಕೂಡಾ ಪರಿಪೂರ್ಣತೆ ಸಾಧಿಸಿಲ್ಲ ಸಂಕುಚಿತತೆ ಕಾಡುತ್ತಿದೆ. ಆಗ ಅವಶ್ಯಕತೆ ಇತ್ತು. ಅನಿವಾರ್ಯವಾಗಿತ್ತು. ಈಗ ಶಿಕ್ಷಕರ ಕೊರತೆ, ಕಟ್ಟಡಗಳ ಬೇಡಿಕೆ ಹೆಚ್ಚುತ್ತಿವೆ. ಅಷ್ಟನ್ನೂ ಒದಗಿಸುವುದು ಸಾಧ್ಯವಿಲ್ಲ. ಕೆಲವೊಂದು ಶಾಲೆಗಳಲ್ಲಿ 10-12 ವಿದ್ಯಾರ್ಥಿಗಳಿದ್ದರೂ 2 ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳ ಸ್ಥಗಿತಗೊಳಿಸಲು ಸ್ಥಳೀಯರು ಒಪ್ಪುತ್ತಿಲ್ಲ. ಹಾಗಂತ ಅವರ ಮಕ್ಕಳನ್ನು ಆ ಶಾಲೆಗೆ ಕಳುಹಿಸುತ್ತಿಲ್ಲ. ಈ ನಡುವೆ ಗ್ರಾಮಕ್ಕೊಂದು ವ್ಯವಸ್ಥಿತ ಮಾದರಿ ಶಾಲೆ ನಿರ್ಮಾಣದ ಚಿಂತನೆ ಇದೆ. ಆ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ ಹೇಳಿದರು.
ಅವರು ಕುಂದಾಪುರದ ಸರಕಾರಿ ಪದವಿ ಪುರ್ವ ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನ ಸ್ಥಿತಿಗತಿ ಅವಲೋಕಿಸಿ ಮಾತನಾಡಿದರು.
ಈಗ 5 ಸಾವಿರ ಜನ ಶಿಕ್ಷಕರ ನೇಮಕಾತಿ ಆಗುತ್ತಿದೆ. ಆದರೂ ಕೂಡಾ 10-12 ಸಾವಿರ ಶಿಕ್ಷಕರ ಕೊರತೆ ಕಾಣುತ್ತಿದೆ. ಅದನ್ನು ಹಂತಹಂತವಾಗಿ ಸರಿಪಡಿಲಾಗುವುದು. ಸರ್ಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳ ಸಹಕಾರ ಶ್ಲಾಘನಾರ್ಹವಾದುದು. 135 ವರ್ಷಗಳ ಇತಿಹಾಸ ಇರುವ ಈ ಶಿಕ್ಷಣ ಸಂಸ್ಥೆ ದೇಶಕ್ಕೆ, ರಾಜ್ಯಕ್ಕೆ ಅನೇಕ ಮಹಾಪುರುಷರನ್ನು ನೀಡಿದೆ ಎಂದರು.
ಹೊಸ ಶಿಕ್ಷಣ ನೀತಿ ಜ್ಯಾರಿಗೆ ಬರುತ್ತಿದೆ, ಅದು ಸಂಪೂರ್ಣ ಪ್ರಾಯೋಗಿಕ ಶಿಕ್ಷಣ ವ್ಯವಸ್ಥೆ. ಕೊಠಡಿಗಳ ಅವಶ್ಯಕತೆ, ಪ್ರಯೋಗಾಲಯಗಳ ಅವಶ್ಯಕತೆಯೂ ಬೇಕಾಗುತ್ತದೆ. ಈ ಬಗ್ಗೆ ದೂರಗಾಮಿ ಚಿಂತನೆಯ ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ ಸ್ವಾಗತಿಸಿ, ಈ ಸಂಸ್ಥೆಯಲ್ಲಿ 1026 ವಿದ್ಯಾರ್ಥಿಗಳು ಪ್ರಥಮ ಪಿಯುಸಿ, 776 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಒಟ್ಟು 1800 ವಿದ್ಯಾರ್ಥಿಗಳು ಪ.ಪೂ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ 490 ವಿದ್ಯಾರ್ಥಿಗಳಿದ್ದಾರೆ. ಒಟ್ಟು 2300 ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಗ್ರಂಥಾಲಯ ವ್ಯವಸ್ಥೆ ಇದೆ. ಆದರೆ ಗ್ರಂಥಪಾಲಕರ ಹುದ್ದೆ ಖಾಲಿ ಇದೆ. ಶೌಚಾಲಯ, ಹಾಗೂ ತರಗತಿ ಕೊಠಡಿಯ ಕೊರತೆಯೂ ಇದೆ ಎಂದರು.
ದ್ವಿತೀಯ ಪಿಯುಸಿಯಲ್ಲಿ 600 ಅಂಕ ರಶ್ಮಿ ನಾಗೇಶ ಉಡುಪ, ಎಸ್.ಎಸ್.ಎಲ್.ಸಿಯಲ್ಲಿ ಸಾಧನೆ ಮಾಡಿದ ಗಿರೀಶ್ ನಾಯಕ್, ವಿದ್ಯಾ ಮರಾಠಿ, ಶ್ರೀರಕ್ಷಾ, ಪ್ರಥಮೇಶ, ಅಂಕಿತಾ, ದೀಕ್ಷತ ಅವರನ್ನು ಸಚಿವರು ಅಭಿನಂದಿಸಿದರು. ಪುರಸಭೆ ಸದಸ್ಯ ಮೋಹನದಾಸ ಶೆಣೈ ಪಿ.ಯು ವಿದ್ಯಾರ್ಥಿಗಳಿಗೂ ಬಿಸಿಯೂಟವನ್ನು ಸರ್ಕಾರದ ವತಿಯಿಂದ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಎ,ಆರ್.ರವಿ, ಪ.ಪೂ ಶಿಕ್ಷಣ ಇಲಾಖೆಯ ಮಾರುತಿ, ಡಿ.ಡಿಪಿಐ ಎನ್.ಎಚ್ ನಾಗೂರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಿರಣ್ ಕುಮಾರ್ ಕೊಡ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮಾನಾಭ ಎಸ್.ಕೆ., ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನೆ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಶಂಕರ ಅಂಕದಕಟ್ಟೆ, ಸದಾನಂದ ಬಳ್ಕೂರು, ಸುರೇಶ ಶೆಟ್ಟಿ ಕಾಡೂರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾಭಿವೃದ್ದಿ ಸಮಿತಿ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.