ಕುಂದಾಪುರ, ಅ 08 (DaijiworldNews/MS): ಅ.7ರಂದು ಹೋಲಿ ರೋಜರಿ ಚರ್ಚ್ನಲ್ಲಿ 450ನೇ ವರ್ಷಾಚರಣೆ ಗುರುವಾರ ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ದಿವ್ಯ ಬಲಿಪೂಜೆಯನ್ನು ಉಡುಪಿ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ ನೇರವೆರಿಸಿ, ಆಶೀವಾರ್ಚನ ನೀಡಿದರು.
ಶಿವಮೊಗ್ಗ ಬಿಷಪ್ ಡಾ| ಪ್ರಾನ್ಸಿಸ್ ಸೆರಾವೋ ಎಸ್.ಜೆ ಪ್ರವಚನ ನೀಡಿ ಮೇರಿ ಮಾತೆಯ ಜೀವನ ನಮಗೆ ಆದರ್ಶ. 450ವರ್ಷದಿಂದ ದೇವರು ನೀಡಿದ ಆಶೀರ್ವಾದವನ್ನು ಆಚರಣೆ ಮಾಡುತ್ತಿದ್ದೇವೆ. ದೇವರು ರೋಜಾರಿ ಮಾತೆ ಮುಖಾಂತರ ಮಾಡಿದ ಪವಾಡಗಳನ್ನು ಆಚರಿಸುತ್ತೆವೆ. ಹೋಲಿ ರೋಜರಿ ಚರ್ಚ ನಡೆದು ಬಂದ ಹಾದಿ, ಆರ್ಥಿಕ ಸುಧಾರಣೆ, ಸಮಾಜ ಸೇವೆ, ಶೈಕ್ಷಣಿಕ ಸುಧಾರಣೆಯನ್ನು ಅಚರಣೆ ಮಾಡುತ್ತಿದ್ದೇವೆ ಎಂದರು.
ಬಲಿ ಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಬ್ಯಾಪ್ಟಿಸ್ಟ್ ಮೆನೆಜಸ್, ಹೋಲಿ ರೋಜರಿ ಚರ್ಚ್ ಧರ್ಮಗುರುಗಳು ಫಾ.ಸ್ಟ್ಯಾನಿ ತಾವ್ರೋ, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು ದಿವ್ಯ ಬಲಿ ಪೂಜೆಯಲ್ಲಿ ಸಹಕರಿಸಿದರು.
ಸಭಾ ಕಾರ್ಯಕ್ರಮ:
ಹೋಲಿ ರೋಜರಿ ಚರ್ಚ್ ಸ್ಥಾಪನೆಯಾಗಿ 450 ವರ್ಷಗಳಾಗಿರುವುದು ವಿಶೇಷ ಸಂದರ್ಭ. ನಾಲ್ಕು ಶತಮಾನದ ಸಾರ್ಥಕ ಸೇವೆಯ ಇತಿಹಾಸವನ್ನು ಈ ಧರ್ಮ ಕೇಂದ್ರ ಹೊಂದಿದೆ. ಭಕ್ತರಾದ ನಾವುಗಳು ನಿಷ್ಠೆ, ಪ್ರಾಮಾಣಿಕತೆ, ದೇವರ ಇಚ್ಛೆಯಂತೆ ಸತ್ಕಾರ್ಯ, ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಮಾತೆ ಮಾರಿಯಮ್ಮವನರ ಸೇವೆಯನ್ನು ಮಾಡುವ ಮೂಲಕ ಜೀವನವನ್ನು ಸಾಕಾರಗೊಳಿಸಿಕೊಳ್ಳುವ ಎಂದು ಶಿವಮೊಗ್ಗ ಬಿಷಪ್ ಡಾ| ಪ್ರಾನ್ಸಿಸ್ ಸೆರಾವೋ ಎಸ್.ಜೆ. ಆಶೀರ್ವಚಿಸಿದರು.
ಅವರು ಗುರುವಾರ ಕುಂದಾಪುರದ ಹೋಲಿ ರೋಜರಿ ಚರ್ಚ್ 450ನೇ ವರ್ಷಾಚರಣೆಯ ಸಮಾರಂಭವನ್ನು ಉದ್ಘಾಟಿಸಿ, ಸಂದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ ಮಾತನಾಡಿ ಮಹೋತ್ಸವದ ಅಂದರೆ ಪಂಚ ಸಾಗರ ಸುಮಧುರ ಸಮ್ಮಿಲನವೇ ಜುಬ್ಲಿ. ಪಂಚ ಸಾಗರ ಎಂದರೆ ಸ್ಮರಣೆ, ಸಂತಾಪ, ಸಂಧಾನ, ಸನ್ಮಾರ್ಗ, ಸಂಭ್ರಮ ಎಂದು ಪವಿತ್ರ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು. 450ನೇ ಈ ಸಂಭ್ರಮದಲ್ಲಿ ಹೋಲಿ ರೋಜಾರಿ ಚರ್ಚನಲ್ಲಿ ನೀಡಿದ ಸೇವೆಯನ್ನು ಸ್ಮರಿಸುತ್ತೇವೆ. ಈ ಮಹೋತ್ಸವ ಒಂದು ವಿಶ್ವಾಸದ ಸಂಭ್ರಮ. ದೇವರು ಮೇರಿ ಮಾತೆ ಮುಖಾಂತರ ಆನೇಕ ಪವಾಡಗಳನ್ನು ಮಾಡಿದ್ದಾರೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಬ್ಯಾಪ್ಟಿಸ್ಟ್ ಮೆನೆಜಸ್, ಚರ್ಚ್ನ ಸಹಾಯಕ ಧರ್ಮಗುರು - ಫಾ.ವಿಜಯ್ ಜೆ. ಡಿ'ಸೋಜಾ, ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಕರ್ನಾಟಕ ಪ್ರೊವಿನ್ಸಿಯಲ್ ಸುಪಿರಿಯರ್ ಸಿ| ಮರಿಯಾ ಶಮಿತಾ, ಪಾಲನಾ ಸಮಿತಿ ಕಾರ್ಯದರ್ಶಿ ಆಶಾ ಕರ್ವಾಲೋ, 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿ'ಕುನ್ಹಾ,
ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ
ಈ ಸಂದರ್ಭದಲ್ಲಿ ಉಡುಪಿ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ, ಶಿವಮೊಗ್ಗ ಡಾ| ಪ್ರಾನ್ಸಿಸ್ ಸೆರಾವೋ ಎಸ್.ಜೆ., ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್, ಈ ಚರ್ಚ್ನಲ್ಲಿ ಧರ್ಮಗುರುಗಳು, ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು, ಧರ್ಮ ಭಗಿನಿಯರು, ದಾನಿಗಳನ್ನು ಸಮ್ಮಾನಿಸಲಾಯಿತು.
ಸ್ಮರಣ ಸಂಚಿಕೆ ಬಿಡುಗಡೆ
ಬರ್ನಾಡ್ ಡಿ'ಕೋಸ್ಟಾ ನೇತೃತ್ವದಲ್ಲಿ ರಚನೆಯಾದ 450 ನೇ ವರ್ಷಾಚರಣೆ ಕುರಿತ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಹೋಲಿ ರೋಜರಿ ಚರ್ಚ್ನ ಪ್ರಧಾನ ಧರ್ಮಗುರು -ಫಾ. ಸ್ಟ್ಯಾನಿ ತಾವ್ರೋ ಸ್ವಾಗತಿಸಿದರು. ಪಾಲನಾ ಸಮಿತಿ ಉಪಾಧ್ಯಕ್ಷ ಎಲ್.ಜೆ. ಫೆರ್ನಾಂಡೀಸ್ ವರದಿ ವಾಚಿಸಿದರು. 450ನೇಯ ವರ್ಷಾಚರಣೆ ಸಮಿತಿ ಕಾರ್ಯದರ್ಶಿ -ಫೆಲ್ಸಿಯಾನಾ ಡಿ'ಸೋಜಾ ವಂದಿಸಿದರು