ಕಾರ್ಕಳ, ಅ.07 (DaijiworldNews/PY): ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ಹೊಸಅಕ್ಕಿ (ತೆನೆ) ಹಬ್ಬದ ಆಚರಣೆಯು ಶ್ರದ್ಧಾ, ಭಕ್ತಿ, ಸಡಗರ, ಸಂಪ್ರದಾಯಕವಾಗಿ ನೆರವೇರಿತು.
ಕಾರ್ಕಳ ಪಡುತಿರುಪತಿ ಶ್ರೀ ವೆಂಕಟರಮಣ ಶ್ರೀ ಕ್ಷೇತ್ರದ ಅಧೀನಕ್ಕೊಳಪಟ್ಟ ತೆಳ್ಳಾರಿನ ಗದ್ದೆಯಲ್ಲಿ ಬೆಳೆಸಿದ ಭತ್ತದ ಪೈರಿಗೆ ಪೂಜಾವಿಧಿ ವಿಧಾನ ನೆರವೇರಿಸಿದ ಬಳಿಕ ಭಕ್ತಾಧಿಗಳು ಭತ್ತದ ತೆನೆ ಕೊಯ್ದು ಅದನ್ನು ನಗರದ ಅನಂತಪದ್ಮನಾಭ ಶ್ರೀ ಕ್ಷೇತ್ರದ ಬಳಿಯಲ್ಲಿರುವ ಶ್ರೀ ಪದ್ಮಾವತಿ ಶ್ರೀ ಕ್ಷೇತ್ರಕ್ಕೆ ತಂದು, ಅಲ್ಲಿ ಪೂಜಾ ವಿಧಿ ನೆರವೇರಿಸಿದ ಬಳಿಕ ಧಾರ್ಮಿಕವಿಧಿ ವಿಧಾನದಂತೆ ಚಕ್ರ ಪಲ್ಲಕ್ಕಿಯಲ್ಲಿ ಭತ್ತದ ತೆನ್ನೆಯನ್ನು ಹೊತ್ತು ಪಡುತಿರುಪತಿ ಶ್ರೀ ವೆಂಕಟರಮಣ ಶ್ರೀ ಕ್ಷೇತ್ರಕ್ಕೆ ಸಾಗಿ ಬಂದು ಅಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ಅರ್ಚಕ ವೃಂದವು ಭಕ್ತಸಮುದಾಯಕ್ಕೆ ಭತ್ತದ ತೆನೆಯನ್ನು ಪ್ರಸಾದದ ರೂಪದಲ್ಲಿ ವಿತರಿಸಿದರು.
ಶ್ರೀ ಪದ್ಮಾವತಿ ಶ್ರೀ ಕ್ಷೇತ್ರದಿಂದ ಪಡುತಿರುಪತಿ ಶ್ರೀ ವೆಂಕಟರಮಣ ಶ್ರೀ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಸಾಗಿ ಬರುವ ಸಂದರ್ಭದಲ್ಲಿ ರಸ್ತೆಯುದ್ಧಕ್ಕೂ ಭಕ್ತಾಧಿಗಳು ನೀಡಿದ ಅರತಿ ಬೆಳಗಿಸಿದ ಅರ್ಚಕರು ಪ್ರಸಾದ ರೂಪದಲ್ಲಿ ಭತ್ತರ ತೆನೆಯನ್ನು ವಿತರಿಸಿದರು.
ಶರನ್ನವರಾತ್ರಿಯ ಪಾಡ್ಯದಂದು ಹೊಸಕ್ಕಿ ಹಬ್ಬವನ್ನು (ತೆನೆಹಬ್ಬ) ಆಚರಿಸುವ ಪದ್ಧತಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತದೆ. ಅದರ ಪ್ರಯುಕ್ತ ಜಿಎಸ್ಬಿ (ಗೌಡ ಸಾರಸ್ಪತ ಬ್ರಾಹ್ಮಣ) ಸಮಾಜದವರು ಸಂಪ್ರದಾಯಕವಾಗಿ ಈ ಹಬ್ಬವನ್ನು ಆಚರಿಸಿದ್ದಾರೆ. ಪಡುತಿರುಪತಿ ಶ್ರೀ ವೆಂಕಟರಮಣ ಕ್ಷೇತ್ರದ ಅನುವಂಶಿಕ ಆಡಳಿತ ಮೊ೦ಕ್ತೇಸರ ಜಯರಾಮ ಪ್ರಭು, ಇತರ ಆಡಳಿತ ಮೊಕ್ತೇಸರರು, ಪರ್ಯಾಯ ಅರ್ಚಕ ಗಣೇಶ್ ಭಟ್ ಮೊದಲಾದವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೃಷಿಗೆ ಧಾರ್ಮಿಕ ಹಿನ್ನಲೆ:
ಪ್ರಸಾದ ರೂಪದಲ್ಲಿ ಕೊಂಡುಹೋಗುವ ಭತ್ತದ ತೆನೆಯನ್ನು ಮನೆಯ ದೇವರ ಕೋಣೆಯಲ್ಲಿ ಇರಿಸಿ ಅಲ್ಲಿ ವಿಶೇಷವಾಗಿ ಪೂಜೆ ನೆರವೇರಿಸಿ ಮಧ್ಯಾಹ್ನದ ಬಿಸಿಯೂಟ ಸಿದ್ಧಗೊಳಿಸುವ ಸಂದರ್ಭದಲ್ಲಿ ಭತ್ತದ ತೆನೆಯ ಕಾಳುಗಳನ್ನು ಅನ್ನಕ್ಕೆ ಬೆರೆಸಿ ಉಣಬಡಿಸುತ್ತಾರೆ.ಇದುವೇ ಹೊಸಅಕ್ಕಿ ಹಬ್ಬ ಎಂದು ರೂಢಿ ಚಾಲ್ತಿಗೆ ಬಂದಿದೆ.
ಉಳಿದ ಭತ್ತದ ತೆನೆಯನ್ನು ಮನೆಯ ಹೆಬ್ಬಾಗಿಲಿಗೆ, ಅಕ್ಕಿ ಶೇಖರಣ, ಖಜಾನೆ, ವ್ಯಾಪಾರ ಕೇಂದ್ರಕ್ಕೆ, ವಾಹನಗಳಿಗೆ, ವಿದ್ಯುತ್ ಪರಿಕರಕ್ಕೆ ಕಟ್ಟುವ ಮೂಲಕ ಕೃಷಿಗೆ ಮಹತ್ವಸ್ಥಾನವನ್ನು ನೀಡುತ್ತಾರೆ.