ಕುಂದಾಪುರ, ಅ 08 (DaijiworldNews/MS): ನಿಮಿಷಕ್ಕೆ 500 ಲೀಟರ್ ನಷ್ಟು ಉತ್ಪಾದನೆ ಸಾಮರ್ಥ್ಯದ ಆಮ್ಲಜನಕ ಸ್ಥಾವರ ಕುಂದಾಪುರದಲ್ಲಿ ಆಗಿರುವುದು ಸಂತಸದ ವಿಚಾರ. ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಮೂರು ಜಿಲ್ಲೆಗಳಿಂದ ಚಿಕಿತ್ಸೆಗೆ ಬರುತ್ತಾರೆ. ಮೂರು ಜಿಲ್ಲೆಗಳಿಗೆ ಈ ಆಮ್ಲಜನಕ ಸ್ಥಾವರದ ಸದುಪಯೋಗ ಆಗುತ್ತದೆ. ಕೋವಿಡ್ ವ್ಯಾಪಕವಾಗಿರುವ ಸಮಯದಲ್ಲಿ ಜೀವ ಉಳಿಸಲು ಆಮ್ಲಜನಕ ಕೊರತೆ ನೀಗಿಸಲು ನಡೆಸಿದ ಶ್ರಮ, ಸಂಸದರು, ಶಾಸಕರು, ಅಧಿಕಾರಿಗಳ ಪ್ರಯತ್ನದಿಂದ ಕುಂದಾಪುರಕ್ಕೆ ಶಾಶ್ವತವಾಗಿ ಆಮ್ಲಜನಕ ಉತ್ಪಾದನ ಸ್ಥಾವರ ಲಭಿಸಿದೆ ಎಂದು ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಹೇಳಿದರು.
ಅವರು ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಉಡುಪಿ ಜಿಲ್ಲೆ, ಆರೋಗ್ಯ ರಕ್ಷಾ ಸಮಿತಿ, ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ, ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇಲ್ಲಿನ ವೈದ್ಯಕೀಯ ಆಮ್ಲಜನಕದ ಸ್ಥಾವರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂದಾಪುರದ ಸಹಾಯಕ ಆಯುಕ್ತ ರಾಜು ಕೆ ಮಾತನಾಡಿ ಅವರು ಕೋವಿಡ್ 19 ನಿಯಂತ್ರಿಸುವಲ್ಲಿ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನ ವಹಿಸಿದೆ. ಕುಂದಾಪುರ ತಾಲೂಕು ಆಸ್ಪತ್ರೆ ಮಾದರಿಯಾಗಿ ಎಲ್ಲರ ಉತ್ತಮ ಸೇವೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ, ಕುಂದಾಪುರ ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಮಂಗಳೂರು ಗೇಲ್ ಇಂಡಿಯಾ ಲಿಮಿಟೆಡ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್.ವಿಜಯಾನಂದ, ಕೋಟೇಶ್ವರ ಲಯನ್ಸ್ ಕ್ಲಬ್ನ ಏಕನಾಥ್ ಬೋಳಾರ್ ಉಪಸ್ಥಿತರಿದ್ದರು.
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಡಾ.ರೊಬರ್ಟ್ ರೆಬೆಲ್ಲೋ ಸ್ವಾಗತಿಸಿದರು, ವೀಣಾ ಶಶಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.