ಕಾರ್ಕಳ, ಅ. 06 (DaijiworldNews/SM): ಸಾಲ ನೀಡಿ ವಸೂಲಾತಿಯ ನೆಪದಲ್ಲಿ ಯುವತಿಯೊಬ್ಬಳನ್ನು ತನ್ನ ಜಾಲಕ್ಕೆ ಸಿಲುಕಿಸಿ ಆಕೆಗೆ ದೌರ್ಜನ್ಯ ಎಸಗಲು ಯತ್ನಿಸಿದ ಹಿನ್ನೆಲೆಯಲ್ಲಿ ಆರೋಪಿಯೊಬ್ಬನನ್ನು ಕಾರ್ಕಳ ನಗರ ಠಾಣಾಧಿಕಾರಿ ಮಧು ಬಿ.ಇ ಬಂಧಿಸಿದ್ದಾರೆ.
ದಲಿತ ಸಮುದಾಯದ ಯುವತಿಯೊಬ್ಬಳಿಗೆ ಆರೋಪಿ ಸಾಧಿಕ್೨ ವರ್ಷದ ಹಿಂದೆ ರೂ. 15,000 ಸಾಲವನ್ನು ನೀಡಿದ್ದನು. ಸಾಲ ವಾಪಾಸು ನೀಡುವಂತೆ ಸಾದಿಕ್ ಯುವತಿಯ ಮನೆಗೆ ಬಂದು ಪೀಡಿಸ ತೊಡಗಿದ್ದನು.
ಮೂರು ತಿಂಗಳ ಹಿಂದೆ ಮಾತುಕತೆ ನಡೆಸುವ ನೆಪದಲ್ಲಿ ಕಾರ್ಕಳ ಪತ್ತೊಂಜಿಕಟ್ಟೆಯ ಒಂದು ಮನೆಗೆ ಕರೆದುಕೊಂಡು ಹೋಗಿದ ಸಾದಿಕ್, ಸಾಲ ವಾಪಾಸು ಕೊಡಬೇಕು ಇಲ್ಲವಾದರೆ ತನಗೆ ಲೈಂಗಿಕ ಸುಖ ನೀಡಬೇಕೆಂದು ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಮಾಡಿದ್ದ. ಅದೇ ವೇಳೆಗೆ ಯುವತಿಯ ನಗ್ನ ಚಿತ್ರಗಳನ್ನು ಆತನ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದಿದ್ದ.
ಈ ಎಲ್ಲಾ ಘಟನೆಯ ಬಳಿಕ ಯುವತಿಗೆ ಸಾದಿಕ್ ನಿರಂತರವಾಗಿ ಕರೆ ಮಾಡಿ ಭಯ ಹುಟ್ಟಿಸುವ ಕಾರ್ಯದಲ್ಲಿ ನಿರತನಾಗಿದ್ದನು. ದೈಹಿಕ ಸುಖ ನೀಡದೇ ಹೋದಲ್ಲಿ ನಗ್ನ ಚಿತ್ರವನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದನು.
ಅಕ್ಟೋಬರ್ 5ರ ರಾತ್ರಿ 11ಗಂಟೆಗೆ ಯುವತಿಗೆ ಕರೆ ಮಾಡಿದ ಆರೋಪಿ ಸಾಧೀಕ್, ನಾಳೆ ಬೆಳಿಗ್ಗೆ ಪತ್ತೊಂಜಿಕಟ್ಟೆಯ ಮನೆಗೆ ಬಾರದೇ ಹೋದಲ್ಲಿ ನಿನ್ನ ಅಕ್ಕನ ಮೊಬೈಲ್ಗೆ ನಿನ್ನ ನಗ್ನ ಚಿತ್ರಗಳನ್ನು ಕಳುಹಿಸಿ ಮಾನ ಹರಾಜು ಹಾಕುತ್ತೇನೆ. ನೀನು ದುಡಿಯುವ ಸಂಸ್ಥೆಗೂ ಬಂದು ಎಲ್ಲರಿಗೂ ಚಿತ್ರವನ್ನು ತೋರಿಸುತ್ತೇನೆಂದು ಬೆದರಿಸಿದ್ದ. ಬಳಿಕ ಆಕೆಗೆ ದೌರ್ಜನ್ಯ ಎಸಗಲು ಯತ್ನಿಸಿದ್ದು, ಯುವತಿ ಆತನ ಕೈಯಿಂದ ಪರಾರಿಯಾಗಿದ್ದಳು. ಈ ಬಗ್ಗೆ ಕಾರ್ಕಳ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.