ಪುತ್ತೂರು, ಅ. 06 (DaijiworldNews/SM): ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥಗೊಂಡ ಘಟನೆ ಪುತ್ತೂರಿನ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದಿದೆ.
ಮನೆಯಲ್ಲಿ ತಯಾರಿಸಿದ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ ಹತ್ತು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಡ್ನೂರು ಕೊಡಂಗೆ ಸಾಂತಪ್ಪರವರ ಪುತ್ರ ರಾಘವರವರ ಮನೆಯಲ್ಲಿ ಈ ಘಟನೆ ನಡೆದಿದೆ. ರಾಘವ, ಅವರ ತಾಯಿ ಹೊನ್ನಮ್ಮ, ಪತ್ನಿ ಲತಾ, ಪುತ್ರಿ ತೃಷಾ, ಸಹೋದರಿ ಬೇಬಿ, ಬಾವಂದಿರಾದ ದೇವಪ್ಪ, ಕೇಶವ, ರಾಘವರವರ ಸಹೋದರಿಯರ ಮಕ್ಕಳಾದ ಸುದೇಶ್, ಧನುಷ್ ಹಾಗೂ ಅರ್ಚನಾ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮ್ಮ ಮನೆ ಸಮೀಪದಲ್ಲಿ ದೊರೆತ ಅಣಬೆಯನ್ನು ಪದಾರ್ಥ ಮಾಡಿ ಮಧ್ಯಾಹ್ನ ಊಟದಲ್ಲಿ ಸೇವಿಸಿದ್ದಾರೆ. ಊಟವಾದ ಕೆಲ ಸಮಯಗಳ ಬಳಿಕ ಸೇವನೆ ಮಾಡಿದವರೆಲ್ಲರ ಆರೋಗ್ಯದಲ್ಲಿ ತೀವ್ರ ತರದ ಏರುಪೇರು ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದವರ ಪೈಕಿ ಹೊನ್ನಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.