ಕಾಸರಗೋಡು, ಅ.06 (DaijiworldNews/PY): ರಾಷ್ಟ್ರೀಯ ಹೆದ್ದಾರಿಯ ಕುಂಬಳೆ-ಕಾಸರಗೋಡು ನಡುವಿನ ಮೊಗ್ರಾಲ್ ಪುತ್ತೂರಿನಲ್ಲಿ ಚಿನ್ನಾಭರಣ ಸಾಗಾಟ ಏಜಂಟ್ರ ಮೇಲೆ ಹಲ್ಲೆ ನಡೆಸಿ 65 ಲಕ್ಷ ರೂ. ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಕಾಸರಗೋಡು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತರನ್ನು ತೃಶ್ಯೂರು ಎಳತುರುರ್ತಿಯ ಬಿನೋಯ್ ಬೇಬಿ (25), ನಡವಯಲ್ನ ಅಖಿಲ್ ಟೋಮಿ (24) ಮತ್ತು ವಯನಾಡು ಪುಳ್ಪಲ್ಲಿಯ ಅನು ಶಾಜು (28) ಎಂದುಗುರುತಿಸಲಾಗಿದೆ. ಮೂವರನ್ನು ತೃಶ್ಯೂರಿನಿಂದ ಬಂಧಿಸಲಾಯಿತು.
ಸಿ ಸಿ ಟಿ ವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆನಿಂದ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಸೆ. 22 ರಂದು ಘಟನೆ ನಡೆದಿತ್ತು.
ಮಹಾರಾಷ್ಟ್ರ ಮೂಲದ ಚಿನ್ನಾಭರಣ ಸಾಗಾಟ ಏಜಂಟ್ ಮೇಲೆ ಹಲ್ಲೆ ನಡೆಸಿ ನಗದನ್ನು ದರೋಡೆಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕಾಸರಗೋಡು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆನಡೆಸಿದ್ದರು. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಿಂದ ಸಿ ಸಿ ಟಿ ವಿ ದೃಶ್ಯಗಳನ್ನು ಕಲೆ ಹಾಕಿದ್ದರು. ಇದರಿಂದ ಕೆಲ ಮಾಹಿತಿಗಳು ಲಭಿಸಿದ್ದವು. ದರೋಡೆಗೆ ಬಳಸಿದ್ದ ಕಾರು ಹಾಗೂ ಆರೋಪಿಗಳ ಚಿತ್ರಣ ಲಭಿಸಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆಯನ್ನು ಕಣ್ಣೂರು, ವಯನಾಡು, ತೃ ಶ್ಯೂರು ಜಿಲ್ಲೆಗೆ ವಿಸ್ತರಿಸಲಾಗಿತ್ತು. ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ತೃಶ್ಯೂರಿನಿಂದ ಮೂವರು ಆರೋಪಿಗಳನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದ ಆರೋಪಿಗಳ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳ ಬಗ್ಗೆ ಮಾಹಿತಿ ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಾಳೆ (ಗುರುವಾರ ) ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಕಸ್ಟಡಿಗೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.