ಕಾರ್ಕಳ, ಅ.06 (DaijiworldNews/PY): ಬಿಜೆಪಿ ಆಡಳಿತವಿರುವ ಕಾರ್ಕಳ ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳ ಸ್ಥಿತಿಗತಿ ಆಯೋಮಯವಾಗಿರುವ ಕುರಿತು ಆಕ್ಷೇಪಿಸಿ ಬಿಜೆಪಿ ಕಾರ್ಯಕರ್ತ ಹಾಗೂ ರಿಕ್ಷಾ ಚಾಲಕರೊಬ್ಬರು ನಗರದ ಮಂಗಳೂರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಮುಖ ರಸ್ತೆಗಳಲ್ಲಿನ ಹೊಂಡ-ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ತೀರಾ ತೊಡಕಾಗುತ್ತಿದೆ. ಡಾಂಬರು ರಸ್ತೆಯಿಂದ ಬೇರ್ಪಟ್ಟ ಜಲ್ಲಿಕಲ್ಲು ವಾಹನಗಳ ಟಯರ್ಗಳಿಗೆ ಸಿಲುಕಿ ಕೆಲವೊಂದು ಸಂದರ್ಭದಲ್ಲಿ ಪಾದಚಾರಗಳ ಮೈಗೆ ತಾಗಿ ರಕ್ತಗಾಯಕ್ಕೂ ಕಾರಣವಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ನಗರದ ಮಂಗಳೂರು ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡಗಳು ಇರುವುದರಿಂದ ಪ್ರಮುಖ ರಸ್ತೆಯ ಸಮಸ್ಸೆಯೂ ಇಲ್ಲಿ ಯಥಾವತ್ತಾಗಿದೆ. ಇದರ ಬಗ್ಗೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಶುಭದರಾವ್ ನೇತೃತ್ವದಲ್ಲಿ ಬಿಳಿಬೆಂಡೆ ಗಿಡ ನೆಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಿವಾದಕ್ಕೂ ಎಡೆಮಾಡಿತ್ತು.
ಇದೀಗ ಬಿಜೆಪಿ ಕಾರ್ಕಳರೊಬ್ಬರು ರಸ್ತೆಯಲ್ಲಿನ ಹೊಂಡದಲ್ಲಿ ಬಾಳೆಗಿಡ ನೆಟ್ಟು ತಮ್ಮ ವಿರೋಧ ವ್ಯಕ್ತಪಡಿಸಿರುವುದು ಬಿಜೆಪಿಗರಿಗೆ ಮುಜುಗರ ಉಂಟು ಮಾಡಿದೆ.
ಕಾರ್ಕಳ ಚಾಲಕ ಮಾಲಕರ ಸಂಘ ಮೌನ:
ಮಳೆಗಾಲ ಮುಗಿಯುತ್ತಿದ್ದಂತೆ ರಸ್ತೆಯ ಸ್ಥಿತಿಗತಿಯ ಕುರಿತು ಜಿಲ್ಲಾಡಳಿತ ಗಮನ ಹರಿಸುವಂತೆ ಹಾಗೂ ಇಂಧನ ದರ ಹೆಚ್ಚಳವಾದ ಸಂದರ್ಭಗಳಲ್ಲಿ ಕಾರ್ಕಳ ತಾಲೂಕು ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ವತಿಯಿಂದ ಪ್ರತಿವರ್ಷ ರಿಕ್ಷಾ ಬಂದ್ ಮಾಡಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ನಡೆಯುತ್ತಾ ಇತ್ತು.
ಕಳೆದ ಕೆಲ ವರ್ಷಗಳಿಂದ ಇಂತಹ ಪ್ರತಿಭಟನೆಗಳಿಗೆ ಸಂಘವು ತಿಲಾಂಜಲಿ ನೀಡಿರುವುದು ಭಾರೀ ಚರ್ಚೆಗ್ರಾಸವನ್ನುಂಟು ಮಾಡಿದೆ.
ಸಂಘದ ಸದಸ್ಯರೋ, ಅಲ್ಲವೋ ಎಂಬುವುದು ಇಲ್ಲಿ ಮುಖ್ಯವಾಗಿರದೇ ರಿಕ್ಷಾ ಚಾಲಕರೊಬ್ಬರು ಬಾಳೆಗಿಡ ನೆಟ್ಟು ರಸ್ತೆ ದುರಸ್ಥಿ ಪಡಿಸುವಂತೆ ಪ್ರತಿಭಟನೆ ನಡೆಸಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.