ಉಡುಪಿ, ಅ 06 (DaijiworldNews/MS): 'ಆರೆಸ್ಸೆಸ್ ಸಂಘಟನೆ ವ್ಯಕ್ತಿ ನಿರ್ಮಾಣದೊಂದಿಗೆ ರಾಷ್ಟ್ರ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ' ಎಂದು ಸಚಿವ ಸುನೀಲ್ ಕುಮಾರ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೆಚ್ಚಿನ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಆರೆಸ್ಸೆಸ್ ನಿಂದ ತರಬೇತಿ ಪಡೆದುಕೊಂಡು ಬಂದವರು ಎಂಬ ಕುಮಾರಸ್ವಾಮಿ ಯವರ ಹೇಳಿಕೆಗೆ ಪ್ರತಿಕ್ರಿಯಿಸಿ ಪೆರಂಪಳ್ಳಿಯಲ್ಲಿ ಮಾತನಾಡಿದ ಸಚಿವರು, " ಹೆಚ್ಡಿಕೆ ಅವರು ಹೇಳಿದಂತೆ ಕೇವಲ 4000 ಅಲ್ಲ ಅದಕ್ಕಿಂತಲೂ ಹೆಚ್ಚು ಮಂದಿ ಇದ್ದಾರೆ.ಆರೆಸ್ಸೆಸ್ ಸಂಘಟನೆ ವ್ಯಕ್ತಿ ನಿರ್ಮಾಣ ಮಾಡುತ್ತದೆ. ಇದರ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ನಮ್ಮಂತಹ ಹಲವಾರು ವ್ಯಕ್ತಿಗಳನ್ನು ನಿರ್ಮಾಣ ಮಾಡಿದೆ. ಕೇವಲ ಐಎಎಸ್ ಮತ್ತು ಐಪಿಎಸ್ ಮಾತ್ರವಲ್ಲದೇ ಇನ್ನಿತರ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಿದ್ದಾರೆ. ಪಿಡಿಒ ನಿಂದ ರಾಷ್ಟ್ರಪತಿವರೆಗೂ ಆರೆಸ್ಸೆಸ್ ನಿಂದ ತರಬೇತಿ ಹೊಂದಿದವರು ಇದ್ದಾರೆ. ಯಾರು ರಾಷ್ಟ್ರ ನಿರ್ಮಾಣದ ವಿರೋಧಿಗಳು ಮಾತ್ರ ಇದನ್ನು ವಿರೋಧ ಮಾಡುತ್ತಾರೆ. ರಾಷ್ಟ್ರ ಪುನರ್ ನಿರ್ಮಾಣದ ಬಗ್ಗೆ ಕಲ್ಪನೆ ಇಲ್ಲದ ಇವರ ಮೇಲೆ ಅನುಕಂಪ ಇದೆ. ಬೇರೆ ಬೇರೆ ಸಂದರ್ಭದಲ್ಲಿ ಅಪ್ಪ ಮಕ್ಕಳು ಅಧಿಕಾರ ಬಳಕೆಯನ್ನು ಚೆನ್ನಾಗಿ ಮಾಡ್ಕೊಂಡು ಬಂದಿದ್ದಾರೆ. ಆದರೆ ಅವರಿಗೆ ಖುಷಿ ಬಂದಂತೆ ಬಳಕೆ ಮಾಡುವ ವಸ್ತು ಆರೆಸ್ಸೆಸ್ ಅಲ್ಲ. ಕುಮಾರಸ್ವಾಮಿ ಹೇಳಿದ್ದಕ್ಕೆ ಈ ಕೆಲಸ ನಿಲ್ಲಲ್ಲ, ಇನ್ನಷ್ಟು ವೇಗ ತೆಗೆದುಕೊಳ್ಳುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ಧರಾಮಯ್ಯ ಜನಾಭಿಪ್ರಾಯ ಕಳೆದುಕೊಂಡಾಗಿದೆ:
ಸಿದ್ಧರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ ವಿಚಾರವಾಗಿ, "ಅವರ ರಾಜಕೀಯ ವಿಚಾರ ಅಂತರಿಕವಾದದ್ದು, ಜನಾಭಿಪ್ರಾಯ ಕಳೆದುಕೊಂಡಾಗಿದೆ. ಒಂದು ಕಡೆ ಸೋತು, ಇನ್ನೊಂದು ಕಡೆ ಕಷ್ಟಪಟ್ಟು ಗೆದ್ದಿದ್ದಾರೆ. ಎಲ್ಲಾ ಉಪಚುನಾವಣೆಯಲ್ಲಿ ಸೋತಿದ್ದು, ಮೈಸೂರಿನಲ್ಲಿ ಅಸ್ತಿತ್ವ ಇಲ್ಲದಂತಾಗಿದೆ . ಯಾವ ರಾಜಕಾರಣ ಮಾಡಬೇಕು ಅಂತ ಅವರೇ ತೀರ್ಮಾನ ಮಾಡಬೇಕು, ಆದರೆ ಜನ ಈಗಾಗಲೇ ತಿರಸ್ಕಾರ ಮಾಡಿಯಾಗಿದೆ ಎಂದು ಲೇವಡಿ ಮಾಡಿದರು.