ಬೈಂದೂರು, ಅ 06 (DaijiworldNews/MS): ಕಡವೆಯನ್ನು ಕೊಂದು ಮಾಂಸ ಮಾಡಿ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಕಡವೆ ಮಾಂಸ, 2 ದ್ವಿಚಕ್ರ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಮುದ್ದೋಡಿ ಸಮೀಪದ ಕುಂಜಳ್ಳಿ ಮಾರ್ಗದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಯಡ್ತರೆ ನಿವಾಸಿಗಳಾದ ಮಮ್ಮಿಶಾಹ್ ಫೈಜಲ್, ಖರುರಿ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ ಈ ಕುಕೃತ್ಯದಲ್ಲಿ ಭಾಗಿಯಾಗಿದ್ದರೆನ್ನಲಾದ ಹೆರಿಯಣ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ ಹಾಗೂ ಇತರರು ಪರಾರಿಯಾಗಿದ್ದಾರೆ.
ಬೈಂದೂರಿನಿಂದ ಕುಂಜಳ್ಳಿಗೆ ಹೋಗುವ ರಸ್ತೆಯ ಮಾರ್ಗ ಮದ್ಯೆ ಕಡವೆಯೊಂದನ್ನು ಹೊಡೆದು ಕೊಂದು ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಬೈಂದೂರು ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು ನೇತೃತ್ವದ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಕಡವೆ ಮಾಂಸ, ಎರಡು ದ್ವಿಚಕ್ರ ವಾಹನ, ಮೊಬೈಲ್ ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ಧ 1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಮಾರ್ಗದರ್ಶನದಲ್ಲಿ ಬೈಂದೂರು ವಲಯಾರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪ ವಲಯ ಅರಣ್ಯಾಧಿಕಾರಿಗಳಾದ ಬಂಗಾರಪ್ಪ ಆಚಾರ್, ಸಚಿನ್ ನಾಯ್ಕ, ರವಿರಾಜ್ ಬಿ., ಅರಣ್ಯ ರಕ್ಷಕರಾದ ಶಂಕರಪ್ಪ, ಮಂಜುನಾಥ ನಾಯ್ಕ, ಮಹೇಶ್ ಎಸ್ ಮಲ್ಲಾಪದ, ಅಂಬ್ರೆಶ್, ಶಾರವಾರಿ, ರವಿ ಜಟ್ಟಿ ಮುರ್ರೆ, ಮಂಜುನಾಥ ಮುರ್ಗಣ್ಣನವರ್, ರಾಮಪ್ಪ ಶಾಡಪ್ಪನವರ್, ವಿನಾಯಕ, ಮಲ್ಲಿಕಾರ್ಜುನ, ವಾಹನ ಚಾಲಕ ಪ್ರಕಾಶ್ ಇದ್ದರು