ಮಂಗಳೂರು, ಅ. 05 (DaijiworldNews/SM): ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ಗುಂಡಿನ ದಾಳಿ ನಡೆದಿದೆ. ವೈಷ್ಣವಿ ಕಾರ್ಗೋ ಮಾಲಕನ ಮೇಲೆ ದಾಳಿಗೆ ಯತ್ನ ನಡೆಸಲಾಗಿದೆ ಎಂದು ಹೇಳಲಾಗಿದೆ.
ಈ ವೇಳೆ ದುರಾದೃಷ್ಟವಶಾತ್ ಮಾಲಕರ ಮಗನಿಗೆ ಗುಂಡು ತಗುಲಿದೆ. ರಾಜೇಶ್, ವೈಷ್ಣವಿ ಕಾರ್ಗೋ ಕಂಪೆನಿಯ ಮಾಲಕರಾಗಿದ್ದು, ಅವರ ಕಂಪೆನಿಯ ಇಬ್ಬರು ಚಾಲಕರಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ಉತ್ತರ ಭಾರತ ಮೂಲದ ಡ್ರೈವರ್ ಚಂದ್ರ ಹಾಗೂ ಅಶ್ರಫ್ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಅವರು ಬೈಕ್ ಮೂಲಕ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಿಗ್ಗೆಯಿಂದಲೇ ಕಂಪೆನಿಯಲ್ಲಿ ಚಾಲಕರು ಕಚೇರಿಯಲ್ಲಿ ಕಿರಿಕ್ ನಡೆಸುತ್ತಿದ್ದರು. ಈ ವೇಳೆ ಮಾಲಕ ರಾಜೇಶ್ ಹಾಗೂ ಮಗ ಮನೆಯಲ್ಲಿದ್ದರು. ರಾಜೇಶ್ ಅವರನ್ನು ಕರೆ ಮಾಡಿ ಅವರ ಪತ್ನಿ ಕಂಪೆನಿಗೆ ಬರುವಂತೆ ತಿಳಿಸಿದ್ದಾರೆ. ರಾಜೇಶ್ ಹಾಗೂ ಪುತ್ರ ಕಚೇರಿಗೆ ಬಂದಾಗ ಮತ್ತೆ ಚಾಲಕರಿಂದ ಕಿರಿಕ್ ಶುರುವಾಗಿದೆ.
ಈ ಸಂದರ್ಭ ಚಾಲಕರು ಹಾಗೂ ರಾಜೇಶ್ ನಡುವೆ ವಾಗ್ವಾದ ನಡೆದಿದೆ. ಅಲ್ಲದೆ, ಓರ್ವ ಡ್ರೈವರ್ ರಾಜೇಶ್ ಅವರ ಪಾಕೇಟ್ ನಲ್ಲಿದ್ದ ಗನ್ ಕಸಿದುಕೊಂಡಿದ್ದಾನೆ. ರಾಜೇಶ್ ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಈ ವೇಳೆ ತಡೆಯಲು ಬಂದ ಮಗನ ಮೇಲೆ ಗುಂಡು ತಗುಲಿದೆ. ಒಂದು ಗುಂಡು ಮಗನ ತಲೆಗೆ ತಗುಲಿದೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಇದೆ.