ಕಾರ್ಕಳ, ಅ.05 (DaijiworldNews/HR): ಶಿರ್ಲಾಲು ಗ್ರಾಮ ಪಂಚಾಯತ್ನ 2021-22 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಶಿರ್ಲಾಲು ಬಸದಿಯ ಸಿದ್ದಲಕ್ಷ್ಮೀ ಸಭಾಭವನದಲ್ಲಿ ಇಂದು ಪಂಚಾಯತ್ ಅಧ್ಯಕ್ಷ ರಮಾನಂದ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂಡ್ಲಿ ಗ್ರಾಮದ ಮಹಿಳೆಯೋರ್ವರು ಕುಡಿಯುವ ನೀರಿನ ಸಮಸ್ಯೆಯಿದ್ದು ಪಂಚಾಯತ್ ಆಡಳಿತ ನಳ್ಳಿ ನೀರು ಒದಗಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಸ್ಥಳೀಯ ವಾರ್ಡ್ನ ಪಂಚಾಯತ್ ಸದಸ್ಯ ಸುಜಿತ್ ಕುಮಾರ್, ಈ ಮನೆಯ ಹಕ್ಕಿನ ಬಗ್ಗೆ ತಕರಾರು ಇದ್ದು ತನಿಖೆ ಪೂರ್ಣಗೊಳ್ಳುವ ವರೆಗೆ ನೀರು ಸಂಪರ್ಕ ಅಸಾಧ್ಯ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಹುತೇಕ ಗ್ರಾಮಸ್ಥರು ನೀರು ಸಂಪರ್ಕ ನೀಡಬೇಕು" ಎಂದರು.
ಆ ಸಂದರ್ಭ ಗ್ರಾಮಸ್ಥರ ನಡುವೆ ಅವಾಚ್ಯ ಶಬ್ದಗಳ ಬಳಕೆಯಾಗಿ ಪರಸ್ಪರ ಹೊಡೆದಾಟ ನಡೆಯಿತು.
ಮನೆಗೆ ನೀರು ಒದಗಿಸಬೇಕು ಎಂಬ ವಿವಾದ ಇರುವುದು ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾರ್ಕಳ ಗ್ರಾಮಕ್ಕೆ ಸಂಬಂಧಿಸಿದ್ದಾಗಿದ್ದಾರೆ, ಹೊಡೆದಾಡಿದವರು ಮಾತ್ರ ಶಿರ್ಲಾಲು ಗ್ರಾಮದವರು. ಇದು ರಾಜಕೀಯ ದ್ವೇಷದಿಂದ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸ್ಥಳಿಯ ಮೂಲಗಳಿಂದ ತಿಳಿದುಬಂದಿದೆ.
ಸಭೆಗೆ ಅಜೆಕಾರು ಪೊಲೀಸ್ ಠಾಣಾಧಿಕಾರಿ ಸುದರ್ಶನ್ ಆಗಮಿಸಿ ಹೊಡೆದಾಡಿಕೊಂಡವರನ್ನು ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೊಗಿದ್ದಾರೆ.
ಕಳೆದ ಕೆಲ ವರ್ಷ ಗಳ ಹಿಂದೆ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ತಾತ್ಕಾಲಿಕ ಹಕ್ಕುಪತ್ರ ನೀಡಲಾಗಿದ್ದರೂ ಇನ್ನು ಡಿನೋಟಿಸ್ ಕೊಟ್ಟಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು.
ಜಲ ಜೀವನ್ ಯೋಜನೆಯಡಿ ನಡೆದ ಕಾಮಗಾರಿ ಅಸಮರ್ಪಕವಾಗಿದೆ. ಪಂಚಾಯತ್ ಗಮನಕ್ಕೆ ತಾರದೆ ಕಾಮಗಾರಿ ನಡೆಸುವುದು ಸೂಕ್ತವಲ್ಲ ಎಂದು ಸುಜಿತ್ ಕುಮಾರ್ ಹೇಳಿದರು.
ಪಂಚಾಯತ್ ವ್ಯಾಪ್ತಿಯ ಮುಂಡ್ಲಿಯಲ್ಲಿ ಕಾರ್ಯಚರಿಸುತ್ತಿರುವ ಪವರ್ ಪ್ರಾಜೆಕ್ಟ್ ಕಂದಾಯ ಭೂಮಿ ಒತ್ತುವರಿ ಮಾಡುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಸುಜಿತ್ ಹೇಳಿದರು. ಆ ಸಂದರ್ಭ ಮಾತನಾಡಿದ ಗ್ರಾಮಸ್ಥರು 2008 ರಲ್ಲಿ ಈ ಯೋಜನೆಗೆ ಅನುಮತಿ ನೀಡಲಾಗಿದೆ. ಇಲ್ಲಿಯ ವರೆಗೆ ಸುಮ್ಮನಿದ್ದು ಈಗ ಪ್ರಶ್ನೀಸುವ ಔಚಿತ್ಯ ಏನು ಎಂದು ಪ್ರಶ್ನಿಸಿದರು. ಈ ಸಂದರ್ಭ ಸಭೆ ಸಂಪೂರ್ಣ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತ್ತು.
ಈ ಸಂದರ್ಭ ಉಜ್ವಲ ಯೋಜನೆಯಡಿ ಅರ್ಹರಿಗೆ ಗ್ಯಾಸ್ ವಿತರಿಸಲಾಯಿತು.