ಮಂಗಳೂರು, ಅ.05 (DaijiworldNews/HR): ಆರು ವರ್ಷಗಳ ಹಿಂದೆ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಇಂದು ಕೊನೆಗೂ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಸಾಕ್ಷ್ಯ ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್ ಸಾಕ್ಷ್ಯ ಹೇಳುತ್ತಿದ್ದಾಗಲೇ ವಿದ್ಯುತ್ ಕೈ ಕೊಟ್ಟಿದ್ದು, ಸುಳ್ಯದಲ್ಲಿ ಆಗುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸ್ವತಃ ನ್ಯಾಯಾಧೀಶರು ಕೂಡ ಡಿ. ಕೆ. ಶಿವಕುಮಾರ್ಗೆ ಮನವರಿಕೆ ಮಾಡಿದರು.
ಮಂಗಳವಾರ ಸುಳ್ಯ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಘಟನೆಯನ್ನು ವಿವರಿಸಿದ ಡಿ. ಕೆ. ಶಿವಕುಮಾರ್, ಆರೋಪಿ ಗಿರಿಧರ್ ರೈ 2016ರ ಫೆಬ್ರವರಿ 27 ಮತ್ತು 28ನೇ ತಾರೀಖಿನಂದು ನನಗೆ ಕರೆ ಮಾಡಿ ತನ್ನ ಊರಿನಲ್ಲಿ ವಿದ್ಯುತ್ ಸಮಸ್ಯೆ ಇದೆ, ಪರಿಹರಿಸಿ ಅಂತಾ ಕೆಟ್ಟದಾಗಿ ಮಾತನಾಡಿದ್ದು, ಕರೆ ಮಾಡಿದ ಎರಡು ದಿನವೂ ನನ್ನಲ್ಲಿ ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಿದ್ದಾರೆ. ಎರಡು ದಿನದಲ್ಲಿ ಐದಾರು ಬಾರಿ ಗಿರಿಧರ್ ರೈ ಕರೆ ಮಾಡಿದ್ದಾರೆ. ಆದರೆ ಎರಡು ಬಾರಿ ಮಾತ್ರ ಕರೆ ಸ್ವೀಕರಿಸಿ ಮಾತನಾಡಿದ್ದೇನೆ" ಎಂದಿದ್ದಾರೆ.
ಇನ್ನು ಕೆಟ್ಟ ಶಬ್ಧಗಳಿಂದ ನಿಂದಿಸಿ ಬೈದು, ಕೊಲೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಿದ್ದೇನೆ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆರೋಪಿ ಗಿರಿಧರ್ ರೈ ನಿಮಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿರೋದು ತಪ್ಪು. ಆದರೆ ಸುಳ್ಯದಲ್ಲಿ ಅಷ್ಟೊಂದು ವಿದ್ಯುತ್ ಸಮಸ್ಯೆ ಇದೆ. ಜನ ಪ್ರತಿನಿತ್ಯ ಲೋಡ್ ಶೆಡ್ಡಿಂಗ್ನಿಂದ ಸಮಸ್ಯೆ ಅನುಭವಿಸುತ್ತಿದ್ದು, ಈಗ ಸ್ವತಃ ನೀವೇ ಅನುಭವ ಮಾಡಿದ್ದೀರಿ ಎಂದು ಪರಿಸ್ಥಿತಿ ಮನವರಿಕೆ ಮಾಡಿದ್ದಾರೆ.
ಕೋರ್ಟ್ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, "ಕಾನೂನಿಗೆ ತಲೆ ಭಾಗಿ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದೇನೆ. ನನಗೆ ಕರೆ ಮಾಡಿದ ವ್ಯಕ್ತಿ ನನಗೆ ಬೈಯೋದು ಮಾತ್ರವಲ್ಲದೇ ಅಧಿಕಾರಿಗಳಿಗೂ ಅವ್ಯಾಚ್ಯವಾಗಿ ಬೈದಿದ್ದಾರೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದಾರೆ" ಎಂದು ಹೇಳಿದ್ದಾರೆ.