ಮಂಗಳೂರು,ಅ 05 (DaijiworldNews/MS): ರಾಷ್ಟ್ರೀಯ ಹೆದ್ದಾರಿ 66 ರ ಕೆಪಿಟಿ ಸಮೀಪ ಸೋಮವಾರ ಮುಂಜಾನೆ ಬೈಕ್ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅ.4 ರ ಸೋಮವಾರ ಬೆಳಗ್ಗೆ ನಡೆದಿದೆ.
ದೇರಳಕಟ್ಟೆಯ ನಿವಾಸಿ ಅಬ್ದುಲ್ ಹಸೀಬ್ (19) ಮೃತಪಟ್ಟವರು. ಸಹಸವಾರ ಇಸ್ಮಾಯಿಲ್ ಸ್ವಾಬೀರ್ (18) ಗಾಯಗೊಂಡವರು.
ಅಬ್ದುಲ್ ಹಸೀಬ್ ಬೈಕ್ ಚಲಾಯಿಸುತ್ತಾ ದೇರಳಕಟ್ಟೆಯಿಂದ ನಂತೂರು ಮಾರ್ಗವಾಗಿ ಕೆಪಿಟಿ ಮೂಲಕ ಬೈಕಂಪಾಡಿಗೆ ಹೊರಟು ತೆರಳುತ್ತಿದ್ದ ಮಾರ್ಗದಲ್ಲಿನ ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಹಾಗೂ ಸಹ ಸವಾರನಿಗೆ ಗಂಭೀರ ಗಾಯಗಳಾಗಿವೆ.
ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಎ.ಜೆ. ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಅಬ್ದುಲ್ ಹಸೀಬ್ ಮೃತಪಟ್ಟಿದ್ದಾರೆ. ಸಹಸವಾರ ಇಸ್ಮಾಯಿಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ ಹಸೀಬ್ ಅವರ ತಂದೆ ಬೈಕಂಪಾಡಿ ಎಪಿಎಂಸಿಯಲ್ಲಿ ತರಕಾರಿ ಅಂಗಡಿ ಹೊಂದಿದ್ದು , ಅಬ್ದುಲ್ ಹಸೀಬ್ ಹಾಗೂ ಕೆಲಸಗಾರ ಇಸ್ಮಾಯಿಲ್ ಅವರು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.