ಬಂಟ್ವಾಳ, ಅ. 05(DaijiworldNews/SM): ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸಂಸದ ಹಾಗೂ ಉಸ್ತುವಾರಿ ಸಚಿವರ ಜೊತೆ ನಿಯೋಗದೊಂದಿಗೆ ಬೇಟಿ ಮಾಡಿ ತಾಲೂಕಿನಲ್ಲಿ ಪಾಕೃತಿಕ ವಿಕೋಪದಲ್ಲಿ ಉಂಟಾದ ಮನೆ ಹಾಗೂ ಕೃಷಿ ಹಾನಿಯ ಬಗ್ಗೆ ಅವರ ಗಮನಕ್ಕೆ ತಂದು ವಿಶೇಷ ಪರಿಹಾರ ನೀಡುವಂತೆ ಒತ್ತಾಯ ಮಾಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಆ.2 ರಂದು ಶನಿವಾರ ಸಂಜೆ ವೇಳೆ ಸುರಿದ ಸಿಡಿಲು ಸಹಿತ ಸುಂಟರಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ನಾಲ್ಕು ಗ್ರಾಮಗಳಾದ ಕಾವಳಮೂಡೂರು, ಬಡಗಕಜೆಕಾರು, ಉಳಿ, ತೆಂಕಕಜೆಕಾರು ಗ್ರಾಮಗಳಲ್ಲಿ ರೈತರ ಕೃಷಿಗೆ ತೀವ್ರವಾಗಿ ಹಾನಿಯಾಗಿದ್ದು ಕೋಟ್ಯಾಂತರ ರೂ ನಷ್ಟ ಸಂಭವಿಸಿದ ರೈತರ ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ತಾಲೂಕಿನಲ್ಲಿ ಹಾನಿಯಾದ ಕೃಷಿಯ ಬಗ್ಗೆ ಹಾಗೂ ನಷ್ಟದ ಅಂದಾಜುಪಟ್ಟಿಯನ್ನು ಶೀಘ್ರವಾಗಿ ತಯಾರಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು. ರೈತರಿಗೆ ನಷ್ಟವುಂಟಾದ ಬಗ್ಗೆ ನೋವಾಗಿದೆ ಎಂದ ಅವರು ವಿಶೇಷ ಪರಿಹಾರದ ಒದಗಿಸಿಕೊಡುವ ಬಗ್ಗೆ ಮುಖ್ಯ ಮಂತ್ರಿ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ತಾಲೂಕಿನಲ್ಲಿ ಸುಮಾರು 30 ಸಾವಿರಕ್ಕೂ ಮಿಕ್ಕಿ ಫಲನೀಡುವ ಅಡಿಕೆ ಮರ, ಸಾವಿರಾರು ತೆಂಗಿನ ಮರ, ಲಕ್ಷಾಂತರ ರೂ ಬೆಲೆ ಬಾಳುವ ವಿವಿಧ ಜಾತಿಯ ಮರಗಳು, 100 ಕ್ಕೂ ಅಧಿಕ ವಾಸದ ಮನೆಗಳಿಗೆ ಸುಂಟರಗಾಳಿಯಿಂದ ಹಾನಿಯಾಗಿರುವ ಬಗ್ಗೆ ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ.ಜೊತೆಗೆ ಮೆಸ್ಕಾಂ ಇಲಾಖೆಗೂ ನಷ್ಟವುಂಟಾಗಿದೆ.