ಬಂಟ್ವಾಳ, ಅ.03 (DaijiworldNews/PY): ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ, ಜ.ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಹಾಗೂ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಇದರ ಜಂಟಿ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಪ್ರಯುಕ್ತ 116ನೇ ರಕ್ತದಾನ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ನಗರ ಪೊಲೀಸ್ ಠಾಣಾ ಎಸ್ಐ ಅವಿನಾಶ್ ಎಚ್.ಗೌಡ ದೀಪ ಪ್ರಜ್ವಲಿಸಿ, ಸ್ವಯಂ ರಕ್ತದಾನ ಮಾಡಿ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "ಸಮಾಜದಲ್ಲಿರುವ ಅಶಕ್ತರು, ಅನಾರೋಗ್ಯ ಪೀಡಿತರ ಸೇವೆಯನ್ನು ಕೃಷ್ಣಕುಮಾರ್ ಪೂಂಜಾ ಅವರ ನೇತೃತ್ವದಲ್ಲಿ ಸೇವಾಂಜಲಿ ಪ್ರತಿಷ್ಠಾನ ಮಾಡುತ್ತಿರುವುದು ಅಭಿನಂದನೀಯ" ಎಂದರು.
"ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸುವುದು ಸುಲಭದ ಮಾತಲ್ಲ. ಆದರೆ ರಕ್ತದಾನಿಗಳನ್ನು ಹುಡುಕಿ ರಕ್ತದಾನ ಮಾಡುವಂತೆ ಪ್ರೇರೆಪಿಸುವ ಕಾರ್ಯವನ್ನು ಸೇವಾಂಜಲಿಯ ತಂಡ ಮಾಡುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ನಿಯೋಜಿತ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, "ಸೇವಾಂಜಲಿ ಪ್ರತಿಷ್ಠಾನದ ವಿವಿಧ ರೀತಿಯ ಕಾರ್ಯಕ್ರಮಗಳಿಂದ ಫರಂಗಿಪೇಟೆ ಪರಿಸರದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿದ್ದು ಎಲ್ಲರೂ ಜಾತಿ, ಧರ್ಮ, ಪಕ್ಷದ ಭೇದವಿಲ್ಲದೆ ಸಮಾನ ಮನಸ್ಸಿನಿಂದ ಇಲ್ಲಿನ ಎಲ್ಲಾ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ ಡಾ. ಚೇತನ್, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಪ್ರಿಯಾಂಕ, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ನ ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ ಸದಸ್ಯರಾದ ರಾಮಚಂದ್ರ ಶೆಟ್ಟಿಗಾರ್, ವಿಜಯ್ ಫೆರ್ನಾಂಡೀಸ್, ಗ್ರಾಮಾಂತರ ಠಾಣ ಎಸ್ಐ ಪ್ರಸನ್ನ ಉಪಸ್ಥಿತರಿದ್ದರು. ಬಂಟ್ವಾಳ ಉಪವಿಭಾಗ ಎಎಸ್ಪಿ ಕಚೇರಿಯ ಪೊಲೀಸ್ ಸಿಬ್ಬಂದಿಗಳಾದ ಸತೀಶ್ ನೂಜಿ ಹಾಗೂ ಸೀತಾರಾಮ ಮತ್ತಿತರರು ರಕ್ತದಾನ ಮಾಡಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಪ್ರಾಸ್ತವಿಕವಾಗಿ ಮಾತನಾಡಿ, ರಕ್ತದಾನ ಶಿಬಿರದ ಅವಶ್ಯಕತೆ ಹಾಗೂ ಸೇವಾಂಜಲಿಯ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ವಂದಿಸಿದರು.
ಸೇವಾಂಜಲಿಯ ಪ್ರಕಾಶ್ ಕಿದೆಬೆಟ್ಟು, ಸುರೇಶ್ ರೈ ಪೆಲಪಾಡಿ, ಆರ್. ಎಸ್. ಜಯ, ಸುಕೇಶ್ ಶೆಟ್ಟಿ ತೇವು, ಪ್ರಶಾಂತ್ ತುಂಬೆ, ಪ್ರಣಾಮ್, ವಿದ್ಯಾ, ಗಾಯತ್ರಿ, ಉಮಾ ಚಂದ್ರಶೇಖರ್, ಎಂ.ಕೆ. ಖಾದರ್ ಸಹಕರಿಸಿದರು. ಒಟ್ಟು 53 ಯುನಿಟ್ ರಕ್ತ ಸಂಗ್ರಹವಾಯಿತು.