ಬಂಟ್ವಾಳ, ಅ.02 (DaijiworldNews/HR): ಕಳ್ಳಿಗೆ, ಅಮ್ಮುಂಜೆ, ಕರಿಯಂಗಳ, ತೆಂಕಬೆಳ್ಳೂರು, ಬಡಗಬೆಳ್ಳೂರು, ಕುರಿಯಾಳ, ಅಮ್ಟಾಡಿ ಮತ್ತು ಅರಳ ವಲಯ ಕಾಂಗ್ರೆಸ್ ಸಮಿತಿ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇವರ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ , ಉಚಿತ ಕಣ್ಣಿನ ಮತ್ತು ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಕಾರ್ಡು ವಿತರಣಾ ಕಾರ್ಯಕ್ರಮವು ಶನಿವಾರ ಪಚ್ಚಿನಡ್ಕ ತೊಡಂಬಿಲ ಚರ್ಚ್ ಹಾಲ್ ನಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಸುಂದರ ಹಾಗೂ ಸಾಮರಸ್ಯದ ಭಾರತದ ಕನಸನ್ನು ಕಂಡ ಗಾಂಧೀಜಿಯವರನ್ನು ಅಪಮಾನಿಸುವ ಘಟನೆಗಳು ನಡೆಯುತ್ತಿದ್ದು ಇದು ಖಂಡನೀಯ. ಈ ಬಗ್ಗೆ ಪ್ರಜ್ಞಾವಂತರು ಮೌನವಾಗಿರದೆ ಅದನ್ನು ವಿರೋಧಿಸುವ ಕೆಲಸ ಮಾಡಬೇಕು" ಎಂದರು.
"ದೇಶ ಎಂದರೆ ಒಂದು ವ್ಯಕ್ತಿ, ಪಕ್ಷ ಅಲ್ಲ. ಹುತಾತ್ಮರಾದವರಿಗೆ ಅಗೌರವ ಕೊಡುವ ಕೆಲಸ ಮಾಡಬಾರದು ಎಂದ ಅವರು, ಗಾಂಧೀಜಿಯ ಆಶಯದಂತೆ ಮತೀಯವಾದಕ್ಕೆ ಜಾತ್ಯಾತೀತವಾದ ಉತ್ತರವಾಗಲಿ" ಎಂದಿದ್ದಾರೆ.
ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ರಕ್ತನಿಧಿ ಕೇಂದ್ರದ ಚಾರು ಕೋಸ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಕಾಂಗ್ರೆಸ್ ಪ್ರಮುಖರಾದ ಸುದರ್ಶನ್ ಜೈನ್, ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಫ್ಲೋಸಿ ಡಿಸೋಜ, ಮಲ್ಲಿಕಾ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.