Karavali
ಉಡುಪಿ: ಉತ್ಕೃಷ್ಟ ಸಾಧನೆಗಳ ಹಾದಿಯಲ್ಲಿ ಸಾಗುತ್ತಿದೆ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಶಿಕ್ಷಣ ಸಂಸ್ಥೆ
- Sat, Oct 02 2021 05:42:05 PM
-
ಉಡುಪಿ, ಅ.02 (DaijiworldNews/HR): ಶ್ರೀ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಬಂಟಕಲ್ನಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅತೀ ಅಗತ್ಯವಾದ ರಾಷ್ಟ್ರೀಯ ಮೌಲ್ಯಾಂಕನ ಮಂಡಳಿ (ಎನ್ಬಿಎ)ಯಿಂದ ಮಾನ್ಯತೆಯು ದೊರಕಿದೆ. ಇದರೊಂದಿಗೆ ಮೇ 2019ರಲ್ಲಿ ನ್ಯಾಕ್ನಿಂದ 'ಎ' ಶ್ರೇಣಿಯ ಮಾನ್ಯತೆ ಕೂಡಾ ದೊರೆತಿದ್ದು, ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಖಾತ್ರಿಪಡಿಸುವ ಈ ಎರಡು ಮಾನ್ಯತೆಗಳನ್ನು ವಿದ್ಯಾಸಂಸ್ಥೆಯು ಪ್ರಾರಂಭವಾದ 11 ವರ್ಷಗಳಲ್ಲಿ ಪಡೆದಿರುವ ಕರಾವಳಿ ಕರ್ನಾಟಕದ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆ ಈ ವಿದ್ಯಾ ಸಂಸ್ಥೆಗೆ ಸಿಕ್ಕಿರುವುದು ಹೆಮ್ಮೆಯ ವಿಷಯ.
ಅತೀ ಕಡಿಮೆ ಅವಧಿಯಲ್ಲಿ ಈ ಎರಡು ಪ್ರತಿಷ್ಠಿತ ಮಾನ್ಯತೆಗಳನ್ನು ಪಡೆದುಕೊಂಡಿರುವುದು ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ತನ್ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಈ ವಿದ್ಯಾಸಂಸ್ಥೆಯು ಕೈಗೊಂಡ ಕ್ರಮಗಳಿಗೆ ಸಂದ ಗೌರವ ಎಂದರೂ ತಪ್ಪಾಗಲಾರದು.
ಈ ಹಿಂದೆ ಇದ್ದ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಎಂಬ ನಾಲ್ಕು ವಿಭಾಗಗಳೊಂದಿಗೆ ಆರ್ಟಿಫ಼ಿಶಿಯಲ್ ಇಂಟೆಲ್ಲಿಜೆನ್ಸ್ ಹಾಗೂ ಮೆಶಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲ್ಲಿಜೆನ್ಸ್ ಹಾಗೂ ಡೇಟಾ ಸೈನ್ಸ್ ಎಂಬ ಹೊಸ ಕೋರ್ಸ್ಗಳನ್ನು ಕೂಡಾ ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ತಂದುಕೊಡುವ ಈ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳನ್ನು ಕ್ಯಾಂಪಸ್ ಪ್ಲೇಸ್ಮೆಂಟ್ ಪ್ರಕ್ರಿಯೆಗಳಿಗೆ ತಯಾರು ಮಾಡುವ ನಿಟ್ಟಿನಲ್ಲಿ, ಅನುಭವಿ ತರಬೇತಿದಾರರಿಂದ ನಿಯತವಾದ ವೃತ್ತಿ ಕೌಶಲ್ಯ ತರಬೇತಿ ಆಯೋಜಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಗಮನಕೊಟ್ಟ ಫಲವಾಗಿ, ಇನ್ಫೋಸಿಸ್, ವಿಪ್ರೋ, ಟಿ.ಸಿ.ಏಸ್, ಎಚ್.ಪಿ. ಎಸ್.ಎ.ಪಿ ಲ್ಯಾಬ್ಸ್, ಮೈಂಡ್ ಟ್ರೀ, ಅಮೆಜಾನ್ ಮುಂತಾದ ಪ್ರತಿಷ್ಠಿತ ಕಂಪೆನಿಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭಿಸಿ ಅವರು ದೇಶ ವಿದೇಶಗಳಲ್ಲಿ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದಾರೆ. 2020-21ನೇ ಸಾಲಿನಲ್ಲಿ 85% ಕ್ಕೂ ಅಧಿಕ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ ಹಾಗೂ ಐ.ಟಿ. ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯವು ನಾಲ್ಕು ವರ್ಷಗಳ ಬಿ.ಎಸ್ಸಿ. ಕೋರ್ಸ್ ಪ್ರಾರಂಭಿಸಲು ಉದ್ಯುಕ್ತವಾಗಿದ್ದು ಇದನ್ನು ಬಂಟಕಲ್ನಲ್ಲಿ ಸಹಾ ಪ್ರಾರಂಭಿಸಲು ನಮ್ಮ ಸಹಯೋಗವನ್ನು ಅಪೇಕ್ಷಿಸಿರುತ್ತಾರೆ. ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲವಾಗುವ, ಉತ್ತಮ ತಾಂತ್ರಿಕ ಕೌಶಲ್ಯಗಳನ್ನು ಕೊಡುವ ಈ ಬಿ.ಎಸ್ಸಿ. ಕೋರ್ಸ್ ಅನ್ನು ಪ್ರಾರಂಭಿಸಲು ನಮ್ಮ ಆಸಕ್ತಿಯನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದು ಅವರಿಂದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ.
ಭವಿಷ್ಯದ ಯೋಜನೆಗಳು:
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಸಂಯೋಜನೆಗೆ ಒಳಪಟ್ಟ ನಾಲ್ಕು ವರ್ಷಗಳ ಬಿ.ಎಸ್ಸಿ. ಕೋರ್ಸ್ ಪ್ರಾರಂಭ.
ಉತ್ಸಾಹೀ ಯುವ ಉದ್ಯಮಿಗಳಿಗೆ ತಮ್ಮ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಲು ಅನುಕೂಲ ಆಗುವ, ಕಾಲೇಜಿನಿಂದ ಪ್ರವರ್ತಿತ ತಂತ್ರಜ್ಞಾನ ಪ್ರವರ್ಧನಾ ಕೇಂದ್ರದ ಸ್ಥಾಪನೆ.
ಭಾರತ ಸರಕಾರದ ಸ್ಟಾರ್ಟ್ ಅಪ್ ಇಂಡಿಯಾ - ಸ್ಟಾಂಡ್ ಅಪ್ ಇಂಡಿಯಾ - ಡಿಜಿಟಲ್ ಇಂಡಿಯಾ ಯೋಜನೆಗಳಿಗೆ ಉತ್ತೇಜನದ ಮೂಲಕ ವಿದ್ಯಾರ್ಥಿಗಳು ಸ್ವೋದ್ಯೋಗಿಗಳಾಗಿ ಯಶಸ್ವಿಯಾಗಲು ಪೂರಕ ಮಾರ್ಗದರ್ಶನ ಮತ್ತು ಸಹಕಾರ
ಪರಿಸರಸ್ನೇಹಿ ಕ್ಯಾಂಪಸ್ ಅಭಿವೃದ್ಧಿ - ಜಲ ಮತ್ತು ಶಕ್ತಿ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಗಾಗಿ, ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಬಳಕೆಗೆ ಉತ್ತೇಜನ
ಇನ್ನು ಈ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಆರ್ಟಿಫ಼ಿಶಿಯಲ್ ಇಂಟೆಲ್ಲಿಜೆನ್ಸ್ ಹಾಗೂ ಮೆಶಿನ್ ಲರ್ನಿಂಗ್, ಆರ್ಟಿಫ಼ಿಶಿಯಲ್ ಇಂಟೆಲ್ಲಿಜೆನ್ಸ್ ಹಾಗೂ ಡೇಟಾ ಸೈನ್ಸ್ ವಿಭಾಗಗಳಿಗೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದ್ದು ಮ್ಯಾನೇಜ್ಮೆಂಟ್ ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಸಿ.ಇ.ಟಿ. ಪ್ರಕ್ರಿಯೆಗಳ ಮೂಲಕವೂ ಕೂಡಾ ಇದೇ ರೀತಿಯ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದ್ದು, ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಸಹ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕಾಲೇಜಿನ ಮೇಲೆ ಭರವಸೆ ಇಟ್ಟಿರುವುದು ಬಹಳ ಸಂತಸದ ವಿಷಯ. ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಸೀಟುಗಳು ಲಭ್ಯವಿದ್ದು ಆಸಕ್ತರು ಕಾಲೇಜಿನ ಕಚೇರಿಯನ್ನು ಸಂಪರ್ಕಿಸಬಹುದು
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಕೇವಲ ಹನ್ನೊಂದು ವರ್ಷಗಳಲ್ಲಿ ಹಲವಾರು ಮೈಲಿಕಲ್ಲನ್ನು ದಾಟಿ, ತಾಂತ್ರಿಕ ಶಿಕ್ಷಣ ಕ್ಷೇತ್ರದ ಮಾದರಿ ಸಂಸ್ಥೆಯಾಗಿ ಬೆಳೆಯುವತ್ತ ಮುನ್ನಡೆಯುತ್ತಿದೆ. ಕ್ರಮಿಸುವ ಹಾದಿ ಸರಿಯಾಗಿದೆ ಎನ್ನುವುದನ್ನು ಪ್ರಮಾಣಿಕರಿಸಲು ನ್ಯಾಕ್, ಎನ್.ಬಿ.ಎ. ಮುಂತಾದ ಸಾಂವಿಧಾನಿಕ ಸ್ವಾಯತ ಸಂಸ್ಥೆಗಳ ಮಾನ್ಯತೆಯು ಪೂರಕವಾಗಿದ್ದು, ಶೀಘ್ರದಲ್ಲಿ, ಪೂಜ್ಯ ಶ್ರೀಪಾದರ ಆಶಯವಾದ ಮಧ್ವ ವಿಶ್ವವಿದ್ಯಾನಿಲಯವಾಗಿ ಬೆಳೆದು ಇನ್ನಷ್ಟು ಸೇವೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಮಾಡಲು ಕಟಿಬದ್ಧವಾಗಿದೆ.
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಕೇವಲ ತಾಂತ್ರಿಕ ಪದವೀಧರರನ್ನು ತಯಾರು ಮಾಡುವ ಸಂಸ್ಥೆಯಾಗದೆ ವಿದ್ಯಾರ್ಥಿಗಳಲ್ಲಿ ಹೊಸತನದ ತುಡಿತವನ್ನು ಮೂಡಿಸಿ, ಅದನ್ನು ನಿರ್ಮಿಸುವ ಗುಣವನ್ನು ಸೃಷ್ಟಿಸಿ, ನಾಯಕತ್ವ ಮತ್ತು ಸ್ವೋದ್ಯೋಗದ ಚಿಂತನೆಯನ್ನು ಬೆಳೆಸಿ, ಅವರ ಸರ್ವತೋಮುಖ ಅಭಿವೃದ್ಧಿಯ ಮೂಲಕ ದೇಶದ ಸುಭದ್ರ ಭವಿಷ್ಯಕ್ಕೆ ಕಾಣಿಕೆಯನ್ನಾಗಿ ಕೊಡುವ ದೂರದೃಷ್ಟಿ ಹೊಂದಿದೆ. ತನ್ಮೂಲಕ ಆರೋಗ್ಯವಂತ ಸ್ವಸ್ಥ ಮತ್ತು ನೈತಿಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸುತ್ತಾ ವಿಶ್ವಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲು ಉದ್ದೇಶಿಸಿದೆ.
ಸುದ್ದಿಗೋಷ್ಠಿಯಲ್ಲಿ ಸೋದೆ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್, ಪ್ರೊ.ಡಾ. ತಿರುಮಲೇಶ್ವರ ಭಟ್ ಪ್ರಾಂಶುಪಾಲರು, ಪ್ರೊ.ವೇಣುಗೋಪಾಲ್ ರಾವ್ ಉಪಸ್ಥಿತರಿದ್ದರು.